ಕಲಬುರಗಿ: ಸಾಮಾಜಿಕ ಅನಿಷ್ಟಗಳ ನಿರ್ಮೂಲನೆಗೆ ಜಾಗೃತಿ ಮೂಡಿಸುವುದೇ ಮದ್ದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಇಶಾ ಪಂತ್ ಹೇಳಿದರು.
ಕಲಬುರಗಿ ರಂಗಾಯಣದಲ್ಲಿ ಪೊಲೀಸರಿಗಾಗಿ ಆಯೋಜಿಸಿರುವ ನಾಟಕ ತರಬೇತಿ ಶಿಬಿರಕ್ಕೆ ಮಂಗಳವಾರ ಚಾಲನೆ ನೀಡಿ ಮಾತನಾಡಿದರು.
ಮಹಿಳಾ ದೌರ್ಜನ್ಯ,ಮಕ್ಕಳ ದುರ್ಬಳಕೆ,ಮಾದಕ ವ್ಯಸನ,ಸಂಚಾರ ನಿಯಮಗಳ ಉಲ್ಲಂಘನೆಯ ಕುರಿತಾಗಿ ಜನರಿಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಪೊಲೀಸರಿಗೆ ನಾಟಕ ತರಬೇತಿ ನೀಡಲು ಕೋರಿದಾಗ ರಂಗಾಯಣ ನಿರ್ದೇಶಕರು ಸಹಕಾರ ನೀಡಿದ್ದು ಸಂತಸ ತಂದಿದೆ. ಕಲಬುರಗಿ ಧಾರ್ಮಿಕ ಸಮನ್ವಯದ ಜಿಲ್ಲೆಯಾಗಿದ್ದು,ಸಾಮರಸ್ಯದ ಜೀವನದಿಂದ ಮಾತ್ರ ಸಾಮಾಜಿಕ ಸ್ವಾಸ್ಥ್ಯ ಕಾಪಾಡಲು ಸಾಧ್ಯ ಎಂದರು.
ಅಧ್ಯಕ್ಷತೆ ವಹಿಸಿದ್ದ ರಂಗಾಯಣ ನಿರ್ದೇಶಕ ಪ್ರಭಾಕರ ಜೋಶಿ, ಸಾಮಾಜಿಕ ಕಳಕಳಿಯುಳ್ಳ ಅಧಿಕಾರಿಗಳು ಇದ್ದಾಗ ಮಾತ್ರ ಪ್ರದೇಶದ ಜನರು ನೆಮ್ಮದಿಯಿಂದ ಇರಲು ಸಾಧ್ಯ. ಈ ದಿಸೆಯಲ್ಲಿ ಕಾಳಜಿ ವಹಿಸಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಇಶಾ ಪಂತ್ ಅವರು,ಪೊಲೀಸರಿಂದಲೇ ಜಾಗೃತಿ ಕುರಿತ ಬೀದಿ ನಾಟಕಗಳನ್ನು ಮಾಡಿಸಲು ಮುಂದೆ ಬಂದಿದ್ದು ಉತ್ತಮ ಬೆಳವಣಿಗೆ ಎಂದರು.
ಸಿಐಡಿ ಡಿವೈಎಸ್ಪಿ ಶಂಕರಗೌಡ ಪಾಟೀಲ ಅತಿಥಿಯಾಗಿದ್ದರು. ನಾಟಕ ತರಬೇತಿ ಶಿಬಿರದ ನಿರ್ದೇಶಕ ಸಂದೀಪ ಬಿ. ಉಪಸ್ಥಿತರಿದ್ದರು. ಮರಿಯಮ್ಮ ರಂಗಗೀತೆ ಪ್ರಸ್ತುತ ಪಡಿಸಿದರು. ಅಕ್ಷತಾ ನಿರೂಪಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.