ಕಲಬುರ್ಗಿ: ಈಶಾನ್ಯ ಶಿಕ್ಷಕರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶಶೀಲ್ ಜಿ. ನಮೋಶಿ ಅವರು ಇಲ್ಲಿನ ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಎಂ.ಎಸ್.ಪಿ ಪದವಿಪೂರ್ವ ಕಾಲೇಜ್, ಪದವಿ ಕಾಲೇಜ್ ಹಾಗೂ ಡಿಪ್ಲೊಮಾ ಕಾಲೇಜುಗಳಿಗೆ ಶನಿವಾರ ಭೇಟಿ ನೀಡಿ ಮತ ಯಾಚಿಸಿದರು.
‘ಕಳೆದ ಹಲವು ವರ್ಷಗಳಿಂದ ರಾಜಕೀಯದಲ್ಲಿ ಶಿಕ್ಷಕರು ಹಾಗೂ ಜನರ ಸೇವೆಗೆ ಸಾಕಷ್ಟು ದುಡಿದಿದ್ದೇನೆ. ಈಗ ಶಿಕ್ಷಕರ ಸೇವೆ ಮಾಡುವ ಮತ್ತೊಂದು ಅವಕಾಶ ಸಿಕ್ಕಿದೆ. ಆದ್ದರಿಂದ ನನಗೆ ಮತ ನೀಡಿ ಗೆಲ್ಲಿಸಬೇಕು’ ಎಂದು ಕೋರಿದರು.
ದತ್ತಾತ್ರೇಯ ಪ್ರಚಾರ: ಶಶೀಲ್ ನಮೋಶಿ ಪರವಾಗಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ ಅವರೂ ನಗರದ ವಿವಿಧೆಡೆ ಪ್ರಚಾರ ನಡೆಸಿದರು.
‘ಕೊರೊನಾದಂಥ ಸಂಕಷ್ಟದ ಸ್ಥಿತಿಯಲ್ಲಿ ನಮ್ಮ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಶಿಕ್ಷಕರ ಒಂದು ರೂಪಾಯಿ ಸಂಬಳವನ್ನೂ ಕಡಿತಗೊಳಿಸಿಲ್ಲ. ಶಿಕ್ಷಕರ ಕ್ಷೇಮ ಹೇಗೆ ಸಾಧ್ಯ, ಅವರ ಮಹತ್ವ ಏನೆಂದು ನಮಗೆ ಗೊತ್ತಿದೆ. ಆದ್ದರಿಂದ ಸರ್ಕಾರದ ಕೈ ಬಲಪಡಿಸಲು ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಬೇಕು’ ಎಂದು ಮನವಿ ಮಾಡಿದರು.
ವಿಧಾನ ಪರಿಷತ್ ಸದಸ್ಯ ಬಿ.ಜಿ. ಪಾಟೀಲ, ಇಂದಿರಾ ಶಕ್ತಿ, ಸಿದ್ಧಾಜಿ ಪಾಟೀಲ, ಪ್ರವೀಣ ತೇಗನೂರ, ಸೂರಜ್ ಪ್ರಸಾದ್ ತಿವಾರಿ, ಶಂಭುಲಿಂಗ ಪಾಟೀಲ, ಶರಣು ಟೆಂಗಳಿ, ಮನೋಹರ ಬಿದನೂರ ಹಾಗೂ ಪಿಡಿಎ ಕಾಲೇಜು ಸಿಬ್ಬಂದಿ ಇದ್ದರು.