ಕಲಬುರ್ಗಿ: ‘ದೇಶದ ಆರ್ಥಿಕ ಬೆಳವಣಿಗೆಯಲ್ಲಿ ಎಂಜಿನಿಯರ್ಗಳ ಪಾತ್ರ ಮಹತ್ವದ್ದಾಗಿದೆ. ವಿಶ್ವೇಶ್ವರಯ್ಯನವರು ಎಲ್ಲ ಎಂಜಿನಿಯರುಗಳಿಗೆ ಆದರ್ಶಪ್ರಾಯರಾಗಿದ್ದಾರೆ’ ಎಂದು ಕಡಗಂಚಿಯ ಕರ್ನಾಟಕ ಕೇಂದ್ರೀಯ ವಿ.ವಿ. ಕುಲಪತಿ ಪ್ರೊ. ಬಿ. ಸತ್ಯನಾರಾಯಣ ಹೇಳಿದರು.
ಎಂಜಿನಿಯರ್ಗಳ ದಿನಾಚರಣೆ ಅಂಗವಾಗಿ ಇಲ್ಲಿನ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು)ದ ಪ್ರಾದೇಶಿಕ ಕೇಂದ್ರದಲ್ಲಿ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿಶ್ವೇಶ್ವರಯ್ಯ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿದರು.
‘ಯುವಕರು ದೇಶಾಭಿಮಾನ ಮತ್ತು ತಾಂತ್ರಿಕತೆಯ ಅವಶ್ಯಕತೆಗಳನ್ನು ಅರಿತುಕೊಂಡು ಅಧ್ಯಯನ ಶೀಲರಾಗಬೇಕು’ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಡಾ.ಶಂಭುಲಿಂಗಪ್ಪ ಅವರು, ವಿಶ್ವೇಶ್ವರಯ್ಯನವರ ಜೀವನದ ಘಟನೆಗಳು ಹಾಗೂ ಕೊಡುಗೆಗಳನ್ನು ಸವಿಸ್ತಾರವಾಗಿ ವಿವರಿಸಿದರು.
ಅಧ್ಯಕ್ಷೀಯ ಭಾಷಣ ಮಾಡಿದ ವಿಟಿಯು ಪ್ರಾದೇಶಿಕ ಕೇಂದ್ರದ ನಿರ್ದೇಶಕ ಡಾ. ಬಸವರಾಜ ಗಾದಗೆ, ಮಾನವತೆಯನ್ನು ರೂಢಿಸಿಕೊಳ್ಳಬೇಕಾದರೆ ಮೊದಲು ಕೊಡುವ ಗುಣವನ್ನು ಬೆಳೆಸಿಕೊಂಡು ಮಾನವತಾವಾದವನ್ನು ಸಾರಬೇಕು’ ಎಂದರು.
ರಕ್ತದಾನ ಮತ್ತು ನೇತ್ರದಾನದ ಅವಶ್ಯತೆಯನ್ನು ತಿಳಿಸಿ ದಾನ ಮಾಡಲು ಮುಂದೆ ಬರುವಂತೆ ಸಲಹೆ ನೀಡಿದರು.
ವಿಶೇಷ ಉಪನ್ಯಾಸ ನೀಡಿದ ನೇತ್ರ ತಜ್ಞೆ ಡಾ.ಸಂಗೀತಾ ಪಾಟೀಲ, ನೇತ್ರದಾನ ಹಾಗೂ ರಕ್ತದಾನದ ಮಹತ್ವವನ್ನು ತಿಳಿಸಿಕೊಟ್ಟರು.
ಅರುಣಕುಮಾರ ಲೋಯಾ ಮಾತನಾಡಿ, ಯುವ ಜನತೆಯಲ್ಲಿ ವಿಶ್ವೇಶ್ವರಯ್ಯನವರ ಗುಣಗಳ ಅಳವಡಿಕೆ ಅವಶ್ಯವಾಗಿದೆ’ ಎಂದರು.
ಅಂಬಿಕಾ ಕಾರ್ಯಕ್ರಮ ನಿರೂಪಿಸಿದರು. ಎಂಬಿಎ ವಿಭಾಗದ ಪ್ರಾಧ್ಯಾಪಕ ಡಾ.ಕೆ. ಶಿವರಾಮನಗೌಡ ನಿರೂಪಿಸಿದರು. ಭಾರತೀಯ ರೆಡ್ಕ್ರಾಸ್ ಗೌರವ ಕಾರ್ಯದರ್ಶಿ ರವೀಂದ್ರ ಶಾಬಾದಿ ವಂದನಾರ್ಪಣೆ ಮಾಡಿದರು.