ಕಲಬುರ್ಗಿ: ಜಿಲ್ಲೆಯಲ್ಲಿ ಕಳೆದ ತಿಂಗಳು ಸುರಿದ ಮಳೆಯಿಂದಾಗಿ ಹಲವೆಡೆ ಅತಿವೃಷ್ಟಿಯಾಗಿದ್ದು, ರೈತರ ಬೆಳೆಗಳಿಗೆ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ. ಇಂತಹ ಸಂಕಷ್ಟದ ಸಂದರ್ಭದಲ್ಲಿ ರೈತರ ಪಂಪ್ಸೆಟ್ಗಳಿಗೆ ಜೆಸ್ಕಾಂನವರು ವಿದ್ಯುತ್ ಮೀಟರ್ ಅಳವಡಿಸುತ್ತಿದ್ದಾರೆ ಎಂದು ಆರೋಪಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ಪುಟ್ಟಣ್ಣಯ್ಯ ಹಾಗೂ ಕೋಡಿಹಳ್ಳಿ ಚಂದ್ರಶೇಖರ ಬಣ) ಕಾರ್ಯಕರ್ತರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ವ್ಯಾಪಕ ಮಳೆಯಿಂದಾಗಿ ಒಡ್ಡುಗಳು ಒಡೆದು ಹೋಗಿ ಅಪಾರ ಪ್ರಮಾಣದ ಫಲವತ್ತಾದ ಮಣ್ಣು ಕೊಚ್ಚಿಕೊಂಡು ಹೋಗಿದೆ. ಜಮೀನನ್ನೇ ನಂಬಿಕೊಂಡು ಕುಟುಂಬ ನಿರ್ವಹಣೆ ಮಾಡುತ್ತಿರುವ ರೈತರು ಬೆಳೆಹಾನಿಯಿಂದಾಗಿ ಮಾನಸಿಕವಾಗಿ ಕುಗ್ಗಿ ಹೋಗಿದ್ದಾರೆ. ರೈತರಿಗೆ ನೆರವಾಗುವ ಕಾರ್ಯ ಕೈಗೊಳ್ಳುವುದನ್ನು ಬಿಟ್ಟು ಪಂಪ್ಸೆಟ್ಗಳಿಗೆ ವಿದ್ಯುತ್ ಮೀಟರ್ ಅಳವಡಿಸುತ್ತಿರುವುದು ಸರಿಯಲ್ಲ ಎಂದು ಟೀಕಿಸಿದರು.
ಆದ್ದರಿಂದ ಜಿಲ್ಲೆಯ ಎಲ್ಲಾ ಗ್ರಾಮಗಳ ಜಮೀನಿನಲ್ಲಿ ಮೀಟರ್ ಅಳವಡಿಕೆಯನ್ನು ತಕ್ಷಣ ನಿಲ್ಲಿಸಬೇಕು ಎಂದು ಒತ್ತಾಯಿಸಿದರು.
ಮಂಜುಳಾ ಭಜಂತ್ರಿ, ನಾಗೇಂದ್ರಪ್ಪ ಥಂಬೆ, ಕಮಲಾಬಾಯಿ ಚನ್ನೂರ, ದೇವಮ್ಮ, ಅಲ್ಲಾಪಟೇಲ್ ಇಜೇರಿ, ಈರಣ್ಣ ಭಜಂತ್ರಿ, ಮಲ್ಲನಗೌಡ ಕೆಲ್ಲೂರ, ಬಸನಗೌಡ ಬಿರಾದಾರ, ಫುಲಾಬಾಯಿ, ಸೈನಾಜ್ ಇತರರು ಇದ್ದರು.