ಯಾದಗಿರಿ: ಜಿಲ್ಲೆಯ ವಡಗೇರಾ ತಾಲ್ಲೂಕಿನ ಶಿವಪುರ ಗ್ರಾಮದ ಸಮೀಪದ ಸಂಗಮ್ ಬ್ರೀಡ್ಜ್ನಲ್ಲಿ ಶಿವಪುರ, ಗೋನಾಲ ಗ್ರಾಮಗಳ ರೈತರು ಸೂಕ್ತ ಪರಿಹಾರಕ್ಕೆ ಒತ್ತಾಯಿಸಿ ಕಳೆದ ಏಳು ದಿನಗಳಿಂದ ನಡೆಸುತ್ತಿರುವ ಧರಣಿ ಸ್ಥಳಕ್ಕೆ ಶಾಸಕ ವೆಂಕಟರೆಡ್ಡಿಗೌಡ ಮುದ್ನಾಳ ಭೇಟಿ ನೀಡಿ ರೈತರ ಸಮಸ್ಯೆ ಆಲಿಸಿದರು.
ತಾಲ್ಲೂಕಿನ ಶಿವಪುರದ ಬಳಿ ಆರ್ಟಿಪಿಸ್ ಘಟಕ ಸ್ಥಾಪಿಸುವ ಸಂಬಂಧ ಕೃಷ್ಣಾ ನದಿಗೆ ಅಡ್ಡಲಾಗಿ ಬ್ರಿಡ್ಜ್ ನಿರ್ಮಿಸಲಾಗಿದೆ. ಇದರ ಗೇಟ್ಗಳು ಬಂದ್ ಮಾಡಿದ ಕಾರಣ ಕಳೆದ ಆಗಸ್ಟ್ನಲ್ಲಿ ಪ್ರವಾಹ ಉಂಟಾಗಿ ರೈತರ ಜಮೀನುಗಳಿಗೆ ನೀರು ನುಗ್ಗಿ ಬೆಳೆ ನಾಶವಾಗಿತ್ತು.
ಬೆಳೆ ಹಾನಿಯಾದ ಜಮೀನುಗಳ ಮಾಲೀಕರಿಗೆ ಪರಿಹಾರ ನೀಡುವಂತೆ ರೈತರು ಪ್ರತಿಭಟನೆ ನಡೆಸುತ್ತಿದ್ದು, ಎಚ್ಚೆತ್ತುಕೊಂಡ ಶಾಸಕರು ಸ್ಥಳಕ್ಕೆ ಭೇಟಿ ನೀಡಿದರು.
‘ಪ್ರವಾಹದಿಂದ ಎಷ್ಟು ಬೆಳೆ ನಾಶವಾಗಿದೆ ಎಂಬುದರ ಕುರಿತು ಅಧಿಕಾರಿಗಳಿಂದ ವರದಿ ತರಿಸಿಕೊಂಡು ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗುವುದು. ಆರ್ಟಿಪಿಎಸ್ ಅಧಿಕಾರಿ, ತಹಶೀಲ್ದಾರ್ ಜೊತೆ ಚರ್ಚೆ ನಡೆಸುತ್ತೇನೆ’ ರೈತರು ಯಾವುದೇ ಕಾರಣಕ್ಕೂ ದುಡುಕಿನ ನಿರ್ಧಾರ ತೆಗೆದುಕೊಳ್ಳಬಾರದು’ ಎಂದು ಪ್ರತಿಭಟನಾ ನಿರತ ರೈತರಿಗೆ ಶಾಸಕರು ಭರವಸೆ ನೀಡಿದರು. ಬಳಿಕ ರೈತರು ಶಾಸಕರ ನೀಡಿದ ಭರವಸೆಯಂತೆ ಪ್ರತಿಭಟನೆ ವಾಪಸ್ ಪಡೆದರು.