ಕಲಬುರ್ಗಿ: ‘ಭ್ರಷ್ಟಾಚಾರ ನಿರ್ಮೂಲನೆಯಂಥ ಸೂಕ್ಷ್ಮ ವಿಷಯಗಳಿಂದ ಹಿಡಿದು, ನಗರ ರಸ್ತೆ ದುರಸ್ತಿಗಳ ಬಗ್ಗೆಯೂ ನಾವು ಹೋರಾಟ ಮಾಡಬೇಕಾದ ಅಗತ್ಯವಿದೆ. ಇದಕ್ಕೆ ಸಂಘಟನಾತ್ಮಕ ಯತ್ನ ಬೇಕು’ ಎಂದುಮಾನವ ಹಕ್ಕುಗಳು ಮತ್ತು ಸಾಮಾಜಿಕ ನ್ಯಾಯ ಸಂಸ್ಥೆ ಅಧ್ಯಕ್ಷ ಪಿ.ಅಭಿಷೇಕ ಹೇಳಿದರು.
ನಗರದಲ್ಲಿ ಮಂಗಳವಾರ ಆಯೋಜಿಸಿದ್ದ ಸಂಸ್ಥೆಯ ನಗರ ಹಾಗೂ ಜಿಲ್ಲೆಯ ಎಲ್ಲ ತಾಲ್ಲೂಕುಗಳ ಪದಾಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸದ್ಯಕ್ಕೆ ಜನರ ಮೂಲ ಅವಶ್ಯಕತೆಗಳಾದ ನೀರು, ರಸ್ತೆ, ವಿದ್ಯುತ್, ಆರೋಗ್ಯ ಮುಂತಾದ ಸೌಕರ್ಯಗಳನ್ನು ಪಡೆದುಕೊಳ್ಳಲು ನಾವು ಧ್ವನಿ ಎತ್ತಬೇಕಿದೆ ಎಂದರು.
ಸಂಸ್ಥೆಯ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಮಾಲಾ ಕಣ್ಣಿ ಮಾತನಾಡಿ, ‘ಹೆಣ್ಣು ಮಕ್ಕಳ ಮೇಲಾಗುತ್ತಿರುವ ಶೋಷಣೆ ಬಗ್ಗೆ, ಸಮಾಜದಲ್ಲಿ ನಡೆಯುವ ಅನ್ಯಾಯದ ವಿರುದ್ಧ ಧ್ವನಿ ಎತ್ತಬೇಕು’ ಎಂದರು.
ಇದೇ ಸಂದರ್ಭದಲ್ಲಿ ಸಂದೀಪ ಹತ್ತಿ ಕೊಗನೂರ ಅವರನ್ನು ಸಂಸ್ಥೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಆಗಿ ನೇಮಿಸಲಾಯಿತು. ಹೊಸದಾಗಿ ನೇಮಕಗೊಂಡ ಕಾರ್ಯಕಾರಿಣಿ ಸದಸ್ಯರೆಲ್ಲರಿಗೂ ಗುರುತಿನ ಚೀಟಿ ನೀಡಲಾಯಿತು.
ಸಂಸ್ಥೆಯ ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ಮಾಲಾ ಎಸ್.ಐ. ದಣ್ಣೂರ ಸ್ವಾಗತಿಸಿದರು.ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಪಾಟೀಲ ಹಾವನೂರ, ಉಪಾಧ್ಯಕ್ಷ ಸಕರೆಪ್ಪಗೌಡ ಪಾಟೀಲ, ನಗರ ಘಟಕದ ಅಧ್ಯಕ್ಷ ಪ್ರಜೋತ್ ಕದಮ್ ಹಾಗೂ ಎಲ್ಲ ತಾಲ್ಲೂಕುಗಳ ಮುಖಂಡರು ಪಾಲ್ಗೊಂಡಿದ್ದರು.