ಕಾಳಗಿ (ಕಲಬುರ್ಗಿ ಜಿಲ್ಲೆ): ಇಲ್ಲಿಯ ಸಂಸ್ಥಾನ ಹಿರೇಮಠದಲ್ಲಿ ಸೋಮವಾರ ಹೃದಯಾಘಾತದಿಂದ ಲಿಂಗೈಕ್ಯರಾದ ಪೀಠಾಧಿಪತಿ ಶಿವಬಸವ ಶಿವಾಚಾರ್ಯರ (45) ಉತ್ತರಾಧಿಕಾರಿಯಾಗಿ ಅವರ ಪೂರ್ವಾಶ್ರಮದ ಸಹೋದರ ಗುರುನಂಜಯ್ಯ ಹಿರೇಮಠ ಅವರ ಮಗ, ಐದು ವರ್ಷದ ಬಾಲಕ ನೀಲಕಂಠ ಅವರನ್ನು ನೇಮಿಸಲಾಯಿತು.
ಹಿರೇನಾಗಾಂವ ಮಠದ ಶ್ರೀಗಳು ಮಂಗಳವಾರ, ಶಿವಬಸವ ಶಿವಾಚಾರ್ಯರ ತಲೆಯ ಮೇಲಿದ್ದ ಹಸಿರು ಶಾಲು, ಕೈಯಲ್ಲಿದ್ದ ಬೆತ್ತವನ್ನು ಉತ್ತರಾಧಿಕಾರಿಗೆ ಹಸ್ತಾಂತರಿಸಿದರು.
‘ಪೀಠಾಧಿಪತಿ ನಿಧನದ ನಂತರ ಉತ್ತರಾಧಿಕಾರಿ ಸ್ಥಾನ ಖಾಲಿ ಬಿಡುವಂತಿಲ್ಲ. ಹೀಗಾಗಿ ನೇಮಿಸಲಾಗಿದೆ’ ಎಂದು ಭಕ್ತರು ಹೇಳಿದರು. ಶಿವಬಸವ ಶಿವಾಚಾರ್ಯರ ಅಂತ್ಯಕ್ರಿಯೆಯು ಪಂಚಾಚಾರ್ಯರ ತತ್ವದಂತೆ ಮಠದ ಆವರಣದಲ್ಲಿ ನಡೆಯಿತು.