ಕಲಬುರ್ಗಿ: ‘ಗುಲಬರ್ಗಾ’ ಮೀಸಲು ಲೋಕಸಭಾ ಕ್ಷೇತ್ರದಲ್ಲಿ ಅಂತಿಮವಾಗಿ 12 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ.
ನಾಮಪತ್ರ ವಾಪಸ್ ಪಡೆಯಲು ಸೋಮವಾರ ಕೊನೆಯ ದಿನವಾಗಿತ್ತು.19 ಅಭ್ಯರ್ಥಿಗಳ ಪೈಕಿಏಳು ಅಭ್ಯರ್ಥಿಗಳು ಉಮೇದುವಾರಿಕೆಯನ್ನು ವಾಪಸ್ ಪಡೆದರು.
ಬರಿಪ ಬಹುಜನ ಮಹಾಸಂಘದ ಗುರುಶಾಂತ ಮಲ್ಲಪ್ಪ ಪಟ್ಟೇದಾರ, ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದ ಜಗನ್ನಾಥ ಮನ್ನು, ರಾಮು ಚತ್ರು, ವಿಠಲ ಡಾಕು ಜಾಧವ, ವಿಶ್ವೇಶ್ವರಯ್ಯ ತುಳಜಾರಾಮ ಭೋವಿ, ಶಶಿಧರ ಬಸವರಾಜ, ಹಣಮಂತರಾಮ ಭೀಮಾ ನಾಯ್ಕ ಎಂ.ಬಿ. ಅವರು ನಾಮಪತ್ರ ವಾಪಸ್ ಪಡೆದಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿ ಆರ್.ವೆಂಕಟೇಶಕುಮಾರ್ ತಿಳಿಸಿದ್ದಾರೆ.
ಈ ಕ್ಷೇತ್ರಕ್ಕೆ ಏಪ್ರಿಲ್ 23ರಂದು ಮತದಾನ ನಡೆಯಲಿದೆ.
ಕಣದಲ್ಲಿ ಉಳಿದಿರುವ ಅಭ್ಯರ್ಥಿಗಳ ವಿವರ
ಹೆಸರು; ಪಕ್ಷ
ಉಮೇಶ ಗೋಪಾಲದೇವ ಜಾಧವ; ಬಿಜೆಪಿ
ಮಲ್ಲಿಕಾರ್ಜುನ ಮಾಪಣ್ಣ ಖರ್ಗೆ; ಕಾಂಗ್ರೆಸ್
ವಾಸುದೇವರಾವ ಭೀಮವಾರ; ಬಿಎಸ್ಪಿ
ದತ್ತಪ್ಪ ಕೃಷ್ಣಪ್ಪ ಕೊಂಕಾಟೆ; ರಾಷ್ಟ್ರೀಯ ಸಮಾಜ ಪಕ್ಷ
ರಾಜಕುಮಾರ ಗೋಪಿನಾಥ ರಾಠೋಡ; ಭಾರತೀಯ ಬಹುಜನ ಕ್ರಾಂತಿ ದಳ
ಲಂಬಾಣಿ ಮಹೇಶ ಈಶ್ವರ ನಾಯಕ; ಉತ್ತಮ ಪ್ರಜಾಕೀಯ ಪಕ್ಷ
ವಿಜಯ ಗೋವಿಂದ ಜಾಧವ; ಸರ್ವ ಜನತಾ ಪಕ್ಷ
ಶರಣಬಸಪ್ಪ ಮಲ್ಲಿಕಾಜಪ್ಪ; ಎಸ್ಯುಸಿಐ (ಸಿ)
ಶಂಕರ ಲಿಂಬಾಜಿ ಜಾಧವ; ಭಾರತೀಯ ಪೀಪಲ್ಸ್ ಪಕ್ಷ
ಜಿ.ತಿಮ್ಮಾರಾಜು ಗಂಗಪ್ಪ; ಪಕ್ಷೇತರ
ಡಾ.ಎಂ.ಪಿ.ದಾರಕೇಶ್ವರಯ್ಯ; ಪಕ್ಷೇತರ
ರಮೇಶ ಭೀಮಸಿಂಗ್; ಪಕ್ಷೇತರ
ಮೂವರು ‘ಜಾಧವ’ ಕಣದಲ್ಲಿ
ಗುಲಬರ್ಗಾ ಕ್ಷೇತ್ರದ ಕಣದಲ್ಲಿ ಬಿಜೆಪಿಯ ಉಮೇಶ ಜಾಧವ, ಸರ್ವ ಜನತಾ ಪಕ್ಷದ ವಿಜಯ ಗೋವಿಂದ ಜಾಧವ, ಭಾರತೀಯ ಪೀಪಲ್ಸ್ ಪಕ್ಷದ ಶಂಕರ ಲಿಂಬಾಜಿ ಜಾಧವ ಹೀಗೆ ಮೂವರು ‘ಜಾಧವ’ರು ಕಣದಲ್ಲಿದ್ದಾರೆ. ಇನ್ನೊಬ್ಬರು ಜಾಧವ ನಾಮಪತ್ರ ವಾಪಸ್ ಪಡೆದಿದ್ದಾರೆ.
‘ಗೊಂದಲ ಸೃಷ್ಟಿಗೆ ಸ್ಪರ್ಧಿಸಿಲ್ಲ’
‘ಡಾ.ಉಮೇಶ ಜಾಧವ ಅಥವಾ ಮತದಾರರಲ್ಲಿ ಗೊಂದಲವನ್ನುಂಟು ಮಾಡಲು ಸ್ಪರ್ಧಿಸಿಲ್ಲ. ನಾನು ಭಾರತೀಯ ಪೀಪಲ್ಸ್ ಪಾರ್ಟಿ ಕಟ್ಟಿ, ಸಂಸ್ಥಾಪಕ ಅಧ್ಯಕ್ಷನಾಗಿ ಗುಲಬರ್ಗಾಸಾಮಾನ್ಯ ಕ್ಷೇತ್ರವಾಗಿದ್ದಾಗಿನಿಂದಲೂ ಸ್ಪರ್ಧಿಸುತ್ತಿದ್ದೇನೆ’ ಎಂದು ಶಂಕರ ಜಾಧವ ಹೇಳಿದ್ದಾರೆ.
‘ಈಗಾಗಲೇ ಮೂರು ಬಾರಿ ಸ್ಪರ್ಧಿಸಿ ಈಗ ನಾಲ್ಕನೇ ಬಾರಿಗೆ ಸ್ಪರ್ಧಿಸಿದ್ದೇನೆ. ನಾನು ಉಮೇಶ ಜಾಧವ ಅವರಿಗೆ ಗೊಂದಲ ಮಾಡುವ ಪ್ರಶ್ನೆಯೇ ಇಲ್ಲ. ಅವರೇ ಕೊನೆ ಗಳಿಗೆಯಲ್ಲಿ ಸ್ಪರ್ಧಿಸಿ ನನಗೆ ಗೊಂದಲವನ್ನುಂಟು ಮಾಡಿದ್ದಾರೆ. ಕಾಂಗ್ರೆಸ್ ಸೋಲಿಸುವುದು ನನ್ನ ಗುರಿ. ಆದರೆ, ಅವರೇ ನನ್ನನ್ನು ಕಣಕ್ಕಿಳಿಸಿದ್ದಾರೆ ಎಂಬುದು ಸರಿಯಲ್ಲ’ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.