ಕಲಬುರ್ಗಿ: ಇಲ್ಲಿನ ಹೈದರಾಬಾದ್ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ (ಎಚ್ ಕೆಸಿಸಿಐ)ಯ ಆಡಳಿತ ಮಂಡಳಿ ಚುನಾವಣೆ ಇಲ್ಲಿನ ಪಬ್ಲಿಕ್ ಗಾರ್ಡನ್ ಬಳಿ ಇರುವ ರೋಟರಿ ಶಾಲೆಯಲ್ಲಿ ಆರಂಭವಾಗಿದೆ.
ಹಾಲಿ ಅಧ್ಯಕ್ಷ ಅಮರನಾಥ ಪಾಟೀಲ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಬೀಗರಾದ ಶಿವಾನಂದ ಮಾನಕರ ಅವರ ಪುತ್ರ ಪ್ರಶಾಂತ ಮಾನಕರ (ಬಿ.ವೈ.ವಿಜಯೇಂದ್ರ ಪತ್ನಿಯ ಸಹೋದರ) ಹಾಗೂ ಸ್ವತಂತ್ರವಾಗಿ ಅರುಣಕುಮಾರ ಲೋಯಾ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದಾರೆ.
ಕಲಬುರ್ಗಿ, ಬೀದರ್, ಯಾದಗಿರಿ, ರಾಯಚೂರು ಹಾಗೂ ಕೊಪ್ಪಳ ಜಿಲ್ಲೆಗಳ 3485 ಮತದಾರರು ಮತ ಚಲಾಯಿಸಲಿದ್ದಾರೆ. ಸಂಜೆ 5ರವರೆಗೆ ಮತದಾನ ನಡೆಯಲಿದೆ.
ಅಧ್ಯಕ್ಷ, ಉಪಾಧ್ಯಕ್ಷ, ಗೌರವ ಜಂಟಿ ಕಾರ್ಯದರ್ಶಿ, ಗೌರವ ಖಜಾಂಚಿ, ಆಡಳಿತ ಮಂಡಳಿ ಸದಸ್ಯರು ಸೇರಿದಂತೆ 24 ಸ್ಥಾನಗಳಿಗೆ ಸಂಜೆ ಚುನಾವಣೆ ನಡೆಯುತ್ತಿದೆ.
ಸಂಜೆ 6ಕ್ಕೆ ಮತ ಎಣಿಕೆ ಆರಂಭವಾಗಲಿದೆ. ತಡರಾತ್ರಿ ಫಲಿತಾಂಶ ಹೊರಬೀಳುವ ನಿರೀಕ್ಷೆ ಇದೆ. ಗೌರವ ಕಾರ್ಯದರ್ಶಿಯಾಗಿ ಶರಣು ಪಪ್ಪಾ ಈಗಾಗಲೇ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.