ಕಲಬುರ್ಗಿ: ಲಾಕ್ಡೌನ್ ಅವಧಿಯ ವೇತನವನ್ನು ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿ ಸರ್ಕಾರಿ ಕೈಗಾರಿಕಾ ತರಬೇತಿ ಅತಿಥಿ ಬೋಧಕರ ಹೋರಾಟ ಸಮಿತಿ ನೇತೃತ್ವದಲ್ಲಿ ಐಟಿಐ ಕಾಲೇಜುಗಳ ಅತಿಥಿ ಬೋಧಕರು ಗುರುವಾರ ಜಿಲ್ಲಾಧಿಕಾರಿ ಕಚೇರಿ ಎದುರು ಘೋಷಣೆ ಕೂಗಿ ಮನವಿ ಸಲ್ಲಿಸಿದರು.
‘ಕಳೆದ ವರ್ಷ ದೇಶಕ್ಕೆ ಬಂದ ಕೊರೊನಾದಿಂದ ಬಹಳಷ್ಟು ಸಮಸ್ಯೆಯನ್ನು ಎದುರಿಸುತ್ತಿದ್ದೇವೆ. ಇನ್ನೂ ಇದೀಗ ಎರಡನೇ ಅಲೆಯಿಂದಾಗಿ ಜೀವನ ನಡೆಸಲು ಪರದಾಡುವಂತಾಗಿದೆ. ಕಳೆದ ಮೂರು ತಿಂಗಳ ವೇತನವಿಲ್ಲದ ಸಂಸಾರಗಳನ್ನು ನಡೆಸುವುದು ಕಷ್ಟವಾಗಿದೆ. ತರಬೇತಿದಾರರ ಹಿತದೃಷ್ಟಿಯಿಂದ ಲಾಕ್ ಡೌನ್ ಸಮಯದಲ್ಲಿ ನಮ್ಮದೇ ಹಣ ಖರ್ಚು ಮಾಡಿಕೊಂಡು ಆನ್ಲೈನ್ ಪಾಠವನ್ನೂ ಮಾಡಿದ್ದೇವೆ. ವಿದ್ಯಾರ್ಥಿಗಳು ದಾಖಲಾದ ಸಂದರ್ಭದಲ್ಲಿ ಮಾತ್ರ ಸೇವೆಗೆ ಅತಿಥಿ ಬೋಧಕರನ್ನು ನೇಮಿಸಿಕೊಳ್ಳಲಾಗುತ್ತಿದೆ. 10–15 ವರ್ಷಗಳಿಂದ ಇಲಾಖೆಯಲ್ಲಿ ಕೆಲಸ ನಿರ್ವಹಿಸಿದವರ ಎಷ್ಟೋ ಜನರ ಸೇವೆ ಕಡಿತಗೊಂಡಿರುತ್ತದೆ. ಹೆರಿಗೆ ಭತ್ಯೆಯೂ ಇರುವುದಿಲ್ಲ’ ಎಂದು ಉಪನ್ಯಾಸಕರು ಮನವಿಯಲ್ಲಿ ತಿಳಿಸಿದ್ದಾರೆ.
‘ದಿನಕ್ಕೆ ₹ 400ರಂತೆ 4 ಗಂಟೆಯಂತೆ ತಿಂಗಳಿಗೆ ₹ 9600 ಸಂಭಾವನೆ ಅತಿ ಕಡಿಮೆ ಆಗಿದ್ದು ಜೀವನ ನಡೆಸಲು ಬಹಳ ಕಷ್ಟವಾಗಿದೆ. ಪ್ರಾಯೋಗಿಕ ಪಾಠ ಇರುವುದರಿಂದ ದಿನಕ್ಕೆ 6 ಗಂಟೆಗಳು ಮೀರಿ ಬೋಧನೆ ಮಾಡಬೇಕಾಗಿದ್ದು ಜೀವನಕ್ಕೆ ಇದೇ ಆಧಾರವಾಗಿರುತ್ತದೆ. ಆದರೆ ಸಮಯಕ್ಕೆ ಸರಿಯಾಗಿ ವೇತನವಿಲ್ಲದೆ ಜೀವನ ನಡೆಸುವುದು ಕಷ್ಟವಾಗಿದೆ. ಕೆಪಿಎಸ್ಸಿ ಮೂಲಕ ಆಯ್ಕೆಯಾಗಿ ಅಭ್ಯರ್ಥಿಗಳು ಬಂದಲ್ಲಿ ಯಾವುದೇ ಕೆಲಸದ ಭದ್ರತೆ ಇರುವುದಿಲ್ಲ. ಅತಿಥಿ ಬೋಧಕರ ಸೇವಾ ಭದ್ರತೆ ಮತ್ತು ವೈದ್ಯಕೀಯ ಭದ್ರತೆ ಖಾತ್ರಿಪಡಿಸಬೇಕು. ಡಿಜಿಇಟಿ ಮಾರ್ಗಸೂಚಿಯಂತೆ ಅತಿಥಿ ಬೋಧಕರ ಮೂಲ ವೇತನವನ್ನು ಮೂರನೇ ಎರಡರಷ್ಟು ಹೆಚ್ಚಳ ಮಾಡಬೇಕು’ ಎಂದು ಆಗ್ರಹಿಸಿದರು.
ಕೆಪಿಎಸ್ಸಿ ಮೂಲಕ ಸರ್ಕಾರಿ ಐಟಿಐ ಕಾಲೇಜುಗಳಲ್ಲಿ 1520 ಕಿರಿಯ ತರಬೇತಿ ಅಧಿಕಾರಿಗಳ ನೇಮಕಾತಿ ಮಾಡಲು ಪ್ರಕ್ರಿಯೆ ಆರಂಭಿಸಬೇಕು ಎಂದರು.
ಸಮಿತಿಯ ಗೌರಿಶಂಕರ, ಮುತ್ತಣ್ಣಾ, ಶರಣು ಶಹಾಬಾದ್, ರವಿಕುಮಾರ ಕುಂಬಾರ, ಲಕ್ಷ್ಮಿ ಸಿ.ಎಸ್., ವೀರೇಶ ಚಿಂಚೂರ, ಶರಣು ವಡಗೇರಾ, ನಾಗರಾಜ ತಳೆಕರ, ಭೀಮಾಶಂಕರ ಹಿಂಚಗೇರಿ, ಪ್ರಭುಲಿಂಗ ಗೋಳಾ, ಶಿವುಕುಮಾರ ಅವರಳ್ಳಿ, ಭೀಮಾಶಂಕರ ಪಾಣೆಗಾಂವ, ಜಗನ್ನಾಥ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.