‘ಕವಿರಾಜ ಮಾರ್ಗದಲ್ಲಿ ಕನ್ನಡ ನಾಡಿನ ವೈಭವವನ್ನು ವಿವರಿಸಲಾಗಿದೆ. ಹೀಗಾಗಿ ಕನ್ನಡದ ಇತಿಹಾಸ ಇಲ್ಲಿಂದಲೇ ಆರಂಭವಾಗಿದೆ ಎಂಬುವುದು ಅತಿಶಯೋಕ್ತಿಯಲ್ಲ. ಜಿಲ್ಲೆಯ ಶಿವಶರಣೆ ದುಗ್ಗಳೆ, ಶಿವಶರಣರಾದ ಏಕಾಂತ ರಾಮಯ್ಯ, ಕೋಲು ಶಾಂತಯ್ಯ, ಜೇವರ್ಗಿ ಷಣ್ಮುಖ ಶಿವಯೋಗಿಗಳು, ಖ್ಯಾತ ತತ್ವಪದಕಾರ ಕಡಕೋಳ ಮಡಿವಾಳಪ್ಪ, ಚೆನ್ನೂರು ಜಲಾಲಸಾಬ್, ಖೈನೂರು ಕೃಷ್ಣಪ್ಪ, ರಾಮಪುರದ ಬಕ್ಕಪ್ಪ, ಮಶಾಕಸಾಬ್, ಚಂಡ್ರಿಕೆ ದಾಸರು ಅನುಭಾವ ಸಾಹಿತ್ಯಕ್ಕೆ ಕ್ರಿಯಾಶೀಲತೆಯನ್ನು ತಂದಿದ್ದಾರೆ. ಕಲ್ಯಾಣದ ಹೆಬ್ಬಾಗಿಲೆಂದು ಕರೆಸಿಕೊಳ್ಳುವ ಕಲಬುರಗಿ ಜಿಲ್ಲೆ ಸಾಹಿತ್ಯ, ಸಂಗೀತ, ಕಲೆ, ಸಾಂಸ್ಕೃತಿಕ ಸಿರಿವಂತಿಕೆಯ ಶ್ರೀಮಂತ ಪ್ರದೇಶ. ಜನಪದ ಸಾಹಿತ್ಯ, ಜನಪದ ಕಲೆಗಳು, ಶರಣರ ವಚನ ಸಾಹಿತ್ಯ, ದಾಸರ ಕೀರ್ತನೆಗಳು, ತತ್ವಪದ ಸಾಹಿತ್ಯ, ಸೂಫಿ–ಸಂತರ ಸಾಹಿತ್ಯಗಳ ಸಮನ್ವಯದ ಸಂಪದ್ಭರಿತ ತವರೂರಾಗಿದೆ‘ ಎಂದರು.