ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರ್ಗಿ: ಗುರು ಪೂರ್ಣಿಮಾ ಸರಳ ಆಚರಣೆ

ದೇವಲಗಾಣಗಾಪುರ ದೇಗುಲ, ಬುದ್ಧ ವಿಹಾರ ಬಂದ್
Last Updated 4 ಜುಲೈ 2020, 15:05 IST
ಅಕ್ಷರ ಗಾತ್ರ

ಕಲಬುರ್ಗಿ: ರಾಜ್ಯ ಸರ್ಕಾರ ಭಾನುವಾರ ಲಾಕ್‌ಡೌನ್ ಘೋಷಿಸಿರುವ ಮತ್ತು ಕೊರೊನಾ ಸೋಂಕು ಹರಡುವ ಭೀತಿ ಇರುವ ಕಾರಣ ಬಹುತೇಕ ದೇಗುಲಗಳಲ್ಲಿ ಗುರುಪೂರ್ಣಿಮಾ ಸರಳವಾಗಿ ಆಚರಿಸಲಾಗುವುದು. ಕೆಲ ಕಡೆ ವಿಶೇಷ ಪೂಜೆಗಳು ನಡೆದರೆ, ಕೆಲ ದೇವಾಲಯಗಳಲ್ಲಿ ದೇವರ ದರ್ಶನಕ್ಕೆ ಅವಕಾಶ ಇರುವುದಿಲ್ಲ.

ಅಫಜಲಪುರ ತಾಲ್ಲೂಕಿನ ದೇವಲಗಾಣಗಪುರದ ದತ್ತ ಮಂದಿರ ಮತ್ತು ಘತ್ತರಗಿಯ ಭಾಗ್ಯವಂತಿ ದೇವಸ್ಥಾನ ಬಂದ್‌ ಇರುತ್ತವೆ. ಕಲಬುರ್ಗಿ ಬುದ್ಧ ವಿಹಾರ ಸಹ ಬಂದ್‌ ಇರಲಿದ್ದು, ಬುದ್ಧ ದರ್ಶನಕ್ಕೆ ಅವಕಾಶ ಇರುವುದಿಲ್ಲ.

ನಗರದ ಶರಣಬಸವೇಶ್ವರ ದೇವಸ್ಥಾನದಲ್ಲಿ ಭಕ್ತರಿಗೆ ಬೆಳಿಗ್ಗೆ 7 ರಿಂದ 10ರವರೆಗೆ ಮಾತ್ರ ದೇವರ ದರ್ಶನ ಪಡೆಯಲು ಅವಕಾಶವಿರುತ್ತದೆ ಎಂದು ದೇವಸ್ಥಾನದ ಪ್ರಮುಖರು ತಿಳಿಸಿದ್ದಾರೆ.

ವ್ಯಾಸ ಪೂರ್ಣಿಮಾ: ನಗರದ ಬಿದ್ದಾಪುರದ ನಂಜನಗೂಡು ರಾಯರ ಮಠ ಮತ್ತು ವಿದ್ಯಾನಗರ ಕಾಲೊನಿಯ ಕೃಷ್ಣ ಮಠದಲ್ಲಿ ವ್ಯಾಸ ಪೂರ್ಣಿಮಾ ನಡೆಯಲಿದೆ. ಬೆಳಿಗ್ಗೆ 9 ರಿಂದ ಮಧ್ಯಾಹ್ನ 12ರವರೆಗೆ ವಿಶೇಷ ಪೂಜೆ ಜರುಗಲಿದ್ದು, ಭಕ್ತರು ದೇವರ ದರ್ಶನ ಪಡೆಯಬಹುದು ಎಂದು ರಾಯರ ಮಠದ ವ್ಯವಸ್ಥಾಪಕ ನವಲೆ ಕೃಷ್ಣಾಚಾರ ತಿಳಿಸಿದರು.

ಸರಳ ಆಚರಣೆ: ರಾಮಮಂದಿರ ಸರ್ಕಲ್‌ ಬಳಿಯಶಿರಡಿ ಸಾಯಿಬಾಬಾ ಮಂದಿರದಲ್ಲಿ ಬೆಳಿಗ್ಗೆ 6.30 ರಿಂದ 8ರವರೆಗೆ ಗುರುಪೂರ್ಣಿಮಾ ಸರಳವಾಗಿ ಆಚರಿಸಲಾಗುವುದು. ಈ ಅವಧಿಯಲ್ಲಿ ಮಾತ್ರ ಭಕ್ತರಿಗೆ ದರ್ಶನ ಮಾಡಲು ಅವಕಾಶವಿರುತ್ತದೆ ಎಂದು ಮಂದಿರದ ಪ್ರತಿನಿಧಿ ಡಾ. ಎನ್.ಜಿ.ಗಚ್ಚಿನಮನಿ ತಿಳಿಸಿದರು.

‘ಮನೆಯಲ್ಲೇ ಮಾತೆಯ ಜನ್ಮದಿನ ಆಚರಿಸಿ’

ತಾಲ್ಲೂಕಿನ ಮಾಣಿಕ್ಯಗಿರಿಯ ಲಿಂ.ಮಾತಾಮಾಣಿಕೇಶ್ವರಿಯವರ 87ನೇ ಜನ್ಮದಿನವನ್ನು ಭಕ್ತರು ಭಾನುವಾರ (ಜುಲೈ 5) ತಮ್ಮ ಮನೆಯಲ್ಲೇ ಆಚರಿಸುವಂತೆ ರೂಪರಹಿತ ಅಹಿಂಸಾ ಯೋಗೀಶ್ವರ ವೀರಧರ್ಮಜಾ ಮಾತಾ ಟ್ರಸ್ಟ್‌ನ ಟ್ರಸ್ಟಿ ಸಿದ್ರಾಮಪ್ಪ ಸಣ್ಣೂರ ಮನವಿ ಮಾಡಿದ್ದಾರೆ.

‘ಭಾನುವಾರ ಬೆಳಿಗ್ಗೆ 7.30ಕ್ಕೆ ಮಾತೆ ಮಾಣಿಕೇಶ್ವರಿಯವರ ಜನ್ಮದಿನ ಮಾಣಿಕ್ಯಗಿರಿಯಲ್ಲಿ ಆಚರಿಸಲಾಗುವುದು. ಕೊರೊನಾ ಸೋಂಕು ಎಲ್ಲೆಡೆ ವ್ಯಾಪಿಸುತ್ತಿರುವ ಕಾರಣ ಭಕ್ತಾದಿಗಳು ಮಾಣಿಕ್ಯಗಿರಿಗೆ ಬಾರದೇ ತಮ್ಮ ಮನೆಗಳಲ್ಲಿ ಜನ್ಮದಿನ ಆಚರಿಸಬೇಕು’ ಎಂದು ಅವರು ಕೋರಿದ್ದಾರೆ.

ಲಾಕ್‌ಡೌನ್‌ ಮಧ್ಯೆಯೂ ಕೆಲ ಭಕ್ತರು ಮಾಣಿಕ್ಯಗಿರಿಗೆ ಬರುವ ಸಾಧ್ಯತೆಯಿದ್ದು ಈ ಕಾರಣ ಡಿವೈಎಸ್ಪಿ ಈ.ಎಸ್‌.ವೀರಭದ್ರಯ್ಯ ನೇತೃತ್ವದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿದೆ.

ಡಿವೈಎಸ್ಪಿ–1, ಸಿಪಿಐ 3, ಪಿಎಸ್ಐ 8, ಎಎಸ್ಐ 15, ಎಚ್‌ಸಿ 30, ಪಿಸಿ 100,ಹೋಂಗಾರ್ಡ್ 20 ಅಲ್ಲದೆ ಸಶಸ್ತ್ರ ಮೀಸಲು ಪಡೆಯ 2 ತುಕಡಿ ಈಗಾಗಲೇ ಮಾಣಿಕ್ಯಗಿರಿಯಲ್ಲಿ ಮೊಕ್ಕಾಂ ಹೂಡಿವೆ. ಮಾಣಕ್ಯಗಿರಿಯ ಮುಖ್ಯದ್ವಾರದ ಬಳಿ ಬ್ಯಾರಿಕೇಡ್ ಹಾಕಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT