ವಾಡಿ: ಸಮೀಪದ ಕೊಂಚೂರು ಹಾಗೂ ನೆರೆಯ ಬಳವಡಗಿ ಗ್ರಾಮಗಳ ಜೋಡೂರು ಜಾತ್ರೆ ಮಂಗಳವಾರ ಸಹಸ್ರಾರು ಭಕ್ತರ ಮಧ್ಯೆ ಅದ್ದೂರಿಯಾಗಿ ಜರುಗಿತು.
ಕೊಂಚೂರು ಗ್ರಾಮದ ಹನುಮಾನ ದೇವಸ್ಥಾನದ ರಥೋತ್ಸವ ಹಾಗೂ ಬಳವಡಗಿಯ ಏಲಾಂಬಿಕಾ ದೇವಿಗೆ ಹಡ್ಡಲಗಿ ತುಂಬುವ ಜಾತ್ರೆಗೆ ಅಪಾರ ಭಕ್ತಸಮೂಹ ಹರಿದು ಬಂದಿತು.
ಹೂವು, ಛತ್ರಿ, ಚಾಮರಗಳಿಂದ ಅಲಂಕೃತಗೊಂಡಿದ್ದ ರಥದಲ್ಲಿ ಅರ್ಚಕರು ಹನುಮನ ಮೂರ್ತಿ ಪ್ರತಿಷ್ಠಾಪನೆ ಮಾಡಿದ ನಂತರ ಪೂಜೆ ಸಲ್ಲಿಸಲಾಯಿತು. ‘ಹನುಮಾನ ಮಹಾರಾಜಕೀ ಜೈ’ ಎಂಬ ಜಯಘೋಷಗಳ ನಡುವೆ ರಥ ಎಳೆಯಲಾಯಿತು. ನೆರೆದಿದ್ದ ಭಕ್ತರು ರಥಕ್ಕೆ ಬಾಳೆಹಣ್ಣು, ಉತ್ತತ್ತಿ ಎಸೆದು ಭಕ್ತಿ ಸಮರ್ಪಿಸಿದರು.
ಇದಕ್ಕೂ ಮೊದಲು ಬಳವಡಗಿಯ ಏಲಾಂಬಿಕಾ ದೇವಿಗೆ ಹಡ್ಡಲಗಿ ತುಂಬುವ ಸಾಂಪ್ರದಾಯಿಕ ಉತ್ಸವದಲ್ಲಿ ಸುತ್ತಲಿನ ಗ್ರಾಮಗಳ ಜನರು ಭಾಗವಹಿಸಿದ್ದರು. ಕುಟುಂಬ ಸಮೇತರಾಗಿ ಚಕ್ಕಡಿ ಹಾಗೂ ಟ್ರ್ಯಾಕ್ಟರ್ಗಳ ಮೂಲಕ ಆಗಮಿಸಿದ್ದ ಭಕ್ತರು ಮನೆಯಿಂದ ತಯಾರಿಸಿಕೊಂಡು ತಂದಿದ್ದ ವಿವಿಧ ಬಗೆಯ ಭಕ್ಷಭೋಜನವನ್ನು ದೇವಿಗೆ ನೈವೇದ್ಯ ರೂಪದಲ್ಲಿ ಸಮರ್ಪಿಸಿ ನಂತರ ದೇವಸ್ಥಾನದ ಅಂಗಳದಲ್ಲಿ ಸಾಮೂಹಿಕ ಭೋಜನ ಸವಿದರು.
ಕರ್ನಾಟಕದ ಹಲವು ಜಿಲ್ಲೆಗಳು ಸೇರಿದಂತೆ ನೆರೆಯ ಮಹಾರಾಷ್ಟ್ರ, ಆಂಧ್ರ ಪ್ರದೇಶ, ತೆಲಂಗಾಣ, ಗುಜರಾತ್ ರಾಜ್ಯಗಳ ಭಕ್ತರು ಜಾತ್ರೆಯಲ್ಲಿ ಪಾಲ್ಗೊಂಡಿದ್ದರು. ಒಂದು ವಾರದಿಂದ ಹಲವು ಧಾರ್ಮಿಕ ಕಾರ್ಯಕ್ರಮಗಳು ನಡೆದವು.
ವಾಡಿ ಪಿಎಸ್ಐ ತಿರುಮಲೇಶ ಕುಂಬಾರ ನೇತೃತ್ವದಲ್ಲಿ ಪೊಲೀಸರು ಬಿಗಿ ಬಂದೋಬಸ್ತ್ ಕಲ್ಪಿಸಿದ್ದರು.
ಬಳವಡಗಿ ಏಲಾಂಬಿಕಾ ದೇವಿಗೆ ಹಡ್ಡಲಗಿ ತುಂಬುವ ಜಾತ್ರೆಯಲ್ಲಿ ಅಪಾರ ಜನರು ಭಾಗವಹಿಸಿದ್ದರು