ಕಲಬುರ್ಗಿ: ಮಾಜಿ ಕಾನೂನು ಸಚಿವ ಪ್ರೊ. ಎ. ಲಕ್ಷ್ಮೀಸಾಗರ ಅವರ ಸ್ಮರಣಾರ್ಥ ಇದೇ 6ರಂದು ಬೆಳಿಗ್ಗೆ 11ಕ್ಕೆ ‘ಜನಗಣತಿ ಮತ್ತು ಸಂವಿಧಾನದ ಆಶಯಗಳು’ ವಿಷಯ ಕುರಿತು ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ದತ್ತಿ ಉಪನ್ಯಾಸ ಆಯೋಜಿಸಲಾಗಿದೆ ಎಂದು ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಅರುಣಕುಮಾರ ಬಿ. ಕಿಣ್ಣಿ ತಿಳಿಸಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಎಚ್. ಕಾಂತರಾಜ ಅವರು ಉಪನ್ಯಾಸ ನೀಡುವರು. ರಾಜ್ಯ ವಕೀಲರ ಪರಿಷತ್ ಅಧ್ಯಕ್ಷ ಶ್ರೀನಿವಾಸ ಬಾಬು ಎಲ್. ಕಾರ್ಯಕ್ರಮ ಉದ್ಘಾಟಿಸುವರು. ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಆರ್.ಜೆ. ಸತೀಶ ಸಿಂಗ್ ಉಪಸ್ಥಿತರಿರುವರು. ಮುಖ್ಯ ಅತಿಥಿಗಳಾಗಿ ಭಾರತೀಯ ವಕೀಲರ ಪರಿಷತ್ ಸದಸ್ಯ ಸದಾಶಿವ ರೆಡ್ಡಿ ವೈ.ಆರ್., ರಾಜ್ಯ ವಕೀಲರ ಪರಿಷತ್ ಉಪಾಧ್ಯಕ್ಷ ಕಿವಾಡ ಕಲ್ಮೇಶ್ವರ ತುಕಾರಾಮ, ಸದಸ್ಯ ಕಾಶೀನಾಥ ಮೋತಕಪಲ್ಲಿ, ಗುಲಬರ್ಗಾ ವಕೀಲರ ಸಂಘದ ಕಾರ್ಯದರ್ಶಿ ಶರಣಬಸವ ಪಸ್ತಾಪೂರ, ಹೈಕೋರ್ಟ್ ಘಟಕದ ಕಾರ್ಯದರ್ಶಿ ಬಸವರಾಜ ಸಿ. ಜಾಕಾ ಭಾಗವಹಿಸುವರು’ ಎಂದರು.
ಇಡೀ ದಿನ ಉಪನ್ಯಾಸ ಕಾರ್ಯಕ್ರಮ ಇರಲಿದ್ದು, ಅತ್ಯಂತ ಸರಳ ಜೀವನ ನಡೆಸಿದ ಹಾಗೂ ಜೀವಿತಾವಧಿಯವರೆಗೂ ಯಾವ ಆಸ್ತಿಯನ್ನೂ ಮಾಡಿಕೊಳ್ಳದ, ಬಾಡಿಗೆ ಮನೆಯಲ್ಲೇ ಕೊನೆಯುಸಿರೆಳೆದ ಲಕ್ಷ್ಮೀಸಾಗರ ಅವರ ವಿದ್ವತ್ತು ಹಾಗೂ ಜೀವನಕ್ರಮದ ಬಗ್ಗೆಯೂ ಉಪನ್ಯಾಸಕರು ಮಾಹಿತಿ ನೀಡಲಿದ್ದಾರೆ’ ಎಂದು ತಿಳಿಸಿದರು.
‘ಮಾ 7ರಂದು ಬೆಳಿಗ್ಗೆ ಇದೇ ಮೊದಲ ಬಾರಿಗೆ ರಾಜ್ಯ ವಕೀಲರ ಪರಿಷತ್ನ ಕಾರ್ಯಕಾರಿ ಸಭೆ ನಡೆಯಲಿದೆ’ ಎಂದು ಕಿಣ್ಣಿ ಹೇಳಿದರು.
ರಾಜ್ಯ ವಕೀಲರ ಪರಿಷತ್ ಸದಸ್ಯ ಕಾಶೀನಾಥ ಮೋತಕಪಲ್ಲಿ, ಜಿಲ್ಲಾ ವಕೀಲರ ಸಂಘದ ಕಾರ್ಯದರ್ಶಿ ಶರಣಬಸವ ಪಸ್ತಾಪೂರ, ಪದಾಧಿಕಾರಿಗಳಾದ ಸಂತೋಷ ಬಿ. ಪಾಟೀಲ, ಸಂತೋಷ ಎಚ್. ಪಾಟೀಲ, ಹಣಮಂತರಾಯ ಅಟ್ಟೂರ ಗೋಷ್ಠಿಯಲ್ಲಿದ್ದರು.
’ಸಿಎಂ ಭೇಟಿಗೆ ಸಮಯ ಸಿಗುತ್ತಿಲ್ಲ’
‘ಕೆಎಟಿ ಪೀಠದ ಕಟ್ಟಡಕ್ಕೆ ಪ್ರತಿ ತಿಂಗಳು ಲಕ್ಷಾಂತರ ಬಾಡಿಗೆ ಪಾವತಿ ಮಾಡಲಾಗುತ್ತಿದೆ. ಜಿಡಿಎಯಿಂದ ನಿವೇಶನ ಪಡೆದು ಸರ್ಕಾರವೇ ಕಟ್ಟಡ ನಿರ್ಮಿಸಿದರೆ ಬಾಡಿಗೆ ಖರ್ಚು ಉಳಿಯುತ್ತದೆ. ಅಲ್ಲದೇ, ವಕೀಲರ ಸಂಘಕ್ಕೆ ₹ 1 ಕೋಟಿ ವೆಚ್ಚದಲ್ಲಿ ಹೈಟೆಕ್ ಗ್ರಂಥಾಲಯ ನಿರ್ಮಿಸಲು ಸ್ವತಃ ಮುಖ್ಯಮಂತ್ರಿ ಅವರೇ ಸೂಚನೆ ನೀಡಿದ್ದರೂ ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ. ಮೊದಲ ಹಂತದಲ್ಲಿ ₹ 25 ಲಕ್ಷ ಕೊಡಿ ಎಂದು ಮನವಿ ಸಲ್ಲಿಸಿದರೂ ಬಜೆಟ್ ಇಲ್ಲ ಎನ್ನುತ್ತಿದ್ದಾರೆ. ಈ ಬಗ್ಗೆ ಚರ್ಚಿಸಲು ಹಲವು ಬಾರಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಚರ್ಚಿಸಲು ಸಮಯ ಕೇಳಿದರೂ ಸಮಯ ಸಿಕ್ಕಿಲ್ಲ. ಆಡಳಿತ ಪಕ್ಷದ ಜಿಲ್ಲೆಯ ಶಾಸಕರೂ ಸಮಯ ಕೊಡಿಸುತ್ತಿಲ್ಲ’ ಎಂದುಅರುಣಕುಮಾರ ಬಿ. ಕಿಣ್ಣಿ ಬೇಸರ ವ್ಯಕ್ತಪಡಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.