ಕಲಬುರ್ಗಿ: ಮಹಾರಾಷ್ಟ್ರದಿಂದ ಮರಳಿದ 36 ಹಾಗೂ ದುಬೈನಿಂದ ಬಂದ ಇಬ್ಬರು ಸೇರಿದಂತೆ ಒಟ್ಟು 39 ಮಂದಿಗೆ ಭಾನುವಾರ ಕೋವಿಡ್–19 ದೃಢಪಟ್ಟಿದೆ. ಇದರಲ್ಲಿ ಒಬ್ಬ ವ್ಯಕ್ತಿಗೆ ಯಾವ ಮೂಲದಿಂದ ಸೋಂಕು ತಗುಲಿದೆ ಎಂದು ಇನ್ನೂ ಪತ್ತೆಯಾಗಿಲ್ಲ.
ಕಲಬುರ್ಗಿ ನಗರದಲ್ಲಿ 2, ತಾಲ್ಲೂಕಿನಲ್ಲಿ 5, ಶಹಾಬಾದ್ 2, ಕಾಳಗಿ 12, ಚಿತ್ತಾಪುರ 13, ಸೇಡಂ 1, ಕಮಲಾಪುರ 2 ಹಾಗೂ ಚಿಂಚೋಳಿ 2 ಪ್ರಕರಣ ಪತ್ತೆಯಾಗಿವೆ.
ಇದರಿಂದ ಜಿಲ್ಲೆಯಲ್ಲಿ ಸೊಂಕಿತರ ಸಂಖ್ಯೆ 660ಕ್ಕೆ ಏರಿದೆ. ಏಳು ಮಂದಿ ಮೃತಪಟ್ಟಿದ್ದು, 166 ಜನ ಗುಣಮುಖರಾಗಿದ್ದಾರೆ. 487 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.
2 ವರ್ಷದ ಮಗುವಿಗೆ ಕೋವಿಡ್
ವಾಡಿ: ಲಾಡ್ಲಾಪುರ ಸಮೀಪದ ಚಾಜುನಾಯಕ ತಾಂಡಾದ 2 ವರ್ಷದ ಹೆಣ್ಣು ಮಗುವಿನಲ್ಲಿ ಕೋವಿಡ್ ಸೋಂಕು ಕಾಣಿಸಿಕೊಂಡಿದೆ. ಮುಂಬೈಯಿಂದ ಪಾಲಕರೊಂದಿಗೆ ಬಂದಿದ್ದ ಮಗುವನ್ನು, ಕ್ವಾರಂಟೈನ್ ಅವಧಿ ಮುಗಿಸಿದ ಮೇಲೆ ತಾಂಡಾಕ್ಕೆ ಕಳುಹಿಸಲಾಗಿತ್ತು.
ಇನ್ನೊಂದೆಡೆ, ಕೊಲ್ಲೂರು ಸಮೀಪದ ಬನ್ನೆಟ್ಟಿ ಗ್ರಾಮದಲ್ಲಿ 20 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ. ಪುಣೆಯಿಂದ ವಾಪಸ್ಸಾಗಿದ್ದ ಮಹಿಳೆ ಹೆಬ್ಬಾಳದಲ್ಲಿ ಕ್ವಾರಂಟೈನ್ ಮುಗಿಸಿ ಮೇ 28ರಂದು ಗ್ರಾಮಕ್ಕೆ ಮರಳಿದ್ದರು.
ಯಾಗಾಪೂರ ಗ್ರಾ.ಪಂ ವ್ಯಾಪ್ತಿಯ ಬದ್ದುನಾಯಕ ತಾಂಡಾದ 3 ವರ್ಷದ ಬಾಲಕನಿಗೆ ಶನಿವಾರ ಕೋವಿಡ್ ದೃಢಪಟ್ಟಿತ್ತು. ಮಗುವನ್ನು ಭಾನುವಾರ ಅಂಬುಲೆನ್ಸ್ ಮೂಲಕ ಕಲಬುರ್ಗಿ ಜಿಲ್ಲಾಸ್ಪತ್ರೆಗೆ ಕಳುಹಿಸಲಾಯಿತು.
ದುಬೈನಿಂದ ಬಂದ ಇಬ್ಬರಿಗೆ ಕೋವಿಡ್
ಚಿಂಚೋಳಿ: ದುಬೈನಿಂದ ಬಂದು ಇಲ್ಲಿನ ಪೋಲಕಪಳ್ಳಿಯ ಆದರ್ಶ ವಿದ್ಯಾಲಯದ ಕ್ವಾರಂಟೈನ್ ಕೇಂದ್ರದಲ್ಲಿದ್ದ ಮಹಿಳೆ ಹಾಗೂ ಅವರ 4 ವರ್ಷದ ಮಗುವಿಗೆ ಕೋವಿಡ್ ದೃಢಪಟ್ಟಿದೆ. ಈ ಮೂಲಕ ತಾಲ್ಲೂಕಿನಲ್ಲಿ ಸೋಂಕಿತರ ಸಂಖ್ಯೆ 37ಕ್ಕೆ ಏರಿದೆ ತಾಲ್ಲೂಕು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ದೀಪಕ ಪಾಟೀಲ ತಿಳಿಸಿದ್ದಾರೆ.
ಕೊರೊನಾ ಆರಂಭದಿಂದ ಇಲ್ಲಿಯವರೆಗೆ ಅವಿಭಜಿತ ತಾಲ್ಲೂಕಿನಲ್ಲಿ ಕೊವಿಡ್-19 ಪೀಡಿತರ ಸಂಖ್ಯೆ 79ಕ್ಕೆ ಏರಿದೆ. ಆದರೆ ಕಾಳಗಿ ಮತ್ತು ಕಮಲಾಪುರ ತಾಲ್ಲೂಕಿಗೆ ಸೇರಿದ ಅವಿಭಜಿತ ಚಿಂಚೋಳಿ ತಾಲ್ಲೂಕಿನ ಹಳ್ಳಿಗಳನ್ನು ಹೊರತುಪಡಿಸಿದರೆ; ಕೊವಿಡ್ ಪೀಡಿತರ ಸಂಖ್ಯೆ 37 ಆಗಲಿದೆ ಎಂದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಇನ್ನೂ ನೆರೆಯ ತಾಲ್ಲೂಕಿಗೆ ಸೇರಿದ ಹಳ್ಳಿಗಳು ಚಿಂಚೋಳಿ ತಾಲ್ಲೂಕು ಆಡಳಿತದಲ್ಲಿಯೇ ಮುಂದುವರಿದಿವೆ. ಹೀಗಾಗಿ, ಅಂಕಿ ಸಂಖ್ಯೆ ಅವುಗಳು ಸೇರಿಯೇ ನೀಡಲಾಗುತ್ತಿದೆ ಎಂದು ತಿಳಿಸಿದರು.
3,000 ಜನರ ಗಂಟಲು ದ್ರವದ ಮಾದರಿ ಮತ್ತು ರಕ್ತದ ಮಾದರಿ ಪರೀಕ್ಷೆಗೆ ಕಳುಹಿಸಲಾಗಿದೆ. ಇಲ್ಲಿವರೆಗೆ 2,000ಕ್ಕೂ ಹೆಚ್ಚು ಜನರ ವರದಿ ಬಂದಿದ್ದು ಇನ್ನೂ ಒಂದು ಸಾವಿರ ಜನರ ವರದಿ ಪ್ರಯೋಗಾಲಯದಿಂದ ಬರಬೇಕಿದೆ ಎಂದರು.