ಚಿಂಚೋಳಿ: ಬಾಪೂರ ಮಹಿಬೂಬನಗರ ರಾಷ್ಟ್ರೀಯ ಹೆದ್ದಾರಿ 167 ಚಿಂಚೋಳಿ ಪಟ್ಟಣಕ್ಕೆ ಹೋಗುತ್ತಿರುವುದರಿಂದ ರಸ್ತೆ ವಿಸ್ತರಿಸದೇ, ಈಗಿರುವ ಅಂಗಡಿಗಳನ್ನು ಹಾಗೆಯೇ ಉಳಿಸಿಕೊಂಡು ಚಿಂಚೋಳಿ ಮತ್ತು ಚಂದಾಪುರ ಪಟ್ಟಣದ ಹೊರಗಡೆಯಿಂದ ಹಾದು ಹೋಗುವಂತೆ ಬೈಪಾಸ್ ರಸ್ತೆ ನಿರ್ಮಿಸಲು ನೀಲನಕ್ಷೆ ತಯಾರಿಸಿ ಸಂಬಂಧಿಸಿದ ಅಧಿಕಾರಿಗೆ ಸಲ್ಲಿಸುವಂತೆ ಸಂಸದ ಉಮೇಶ ಜಾಧವ ರಾಷ್ಟ್ರೀಯ ಹೆದ್ದಾರಿ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ಗುರುರಾಜ ಜೋಷಿ ಅವರಿಗೆ ಸೂಚಿಸಿದರು.
ಅವರು ತಾಲ್ಲೂಕಿನ ಕುಂಚಾವರಂ ಗ್ರಾಮದಲ್ಲಿ ಅಧಿಕಾರಿಗಳ ಸಭೆ ನಡೆಸಿ ಯೋಜನೆ ಮಾಹಿತಿ ಪಡೆದು ಬೈ ಪಾಸ್ ರಸ್ತೆ ಕಡ್ಡಾಯವಾಗಿ ನಿರ್ಮಿಸಲು ಅಗತ್ಯ ಸ್ಥಳವನ್ನು ಸರ್ವೇ ಮೂಲಕ ಗುರುತಿಸುವಂತೆ ಸೂಚಿಸಿದರು.
ಚಿಂಚೋಳಿಯ ಹೊರಗಡೆಯಿಂದ ಹಾದು ಹೋಗುವ ಬೈಪಾಸ್ ರಸ್ತೆ ಮೂರು ನೀಲ ನಕ್ಷೆ ಮಾದರಿ ಪರಿಶೀಲಿಸಿದ ಅವರು, ಅರಣ್ಯ ಪ್ರದೇಶಕ್ಕೆ ಧಕ್ಕೆಯಾಗದಂತೆ ಯೋಜನೆ ಅನುಷ್ಠಾನಗೊಳಿಸಲು ಸೂಚಿಸಿದರು.
ಕಾರ್ಯಪಾಲಕ ಎಂಜಿನಿಯರ್ ಗುರುರಾಜ ಜೋಷಿ, ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್ ಕೃಷ್ಣಾ ಅಗ್ನಿಹೋತ್ರಿ, ತಹಶೀಲ್ದಾರ್ ಅಂಜುಮ ತಬಸ್ಸುಮ್, ತಾ.ಪಂ. ಇಒ ಅನಿಲಕುಮಾರ ರಾಠೋಡ್, ವನ್ಯಜೀವಿ ಧಾಮದ ವಲಯ ಅರಣ್ಯಾಧಿಕಾರಿ ಸಂಜೀವಕುಮಾರ ಚವ್ಹಾಣ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.
ಇದೇ ವೇಳೆ ತಹಶೀಲ್ದಾರ್ ಅಂಜುಮ ತಬಸ್ಸುಮ ಅವರು ಸಂಸದರು ಮತ್ತು ಅಧಿಕಾರಿಗಳ ಜತೆಗೆ ಫಲಾಹಾರ ಸೇವಿಸುವ ಮೂಲಕ ರೋಜಾಕ್ಕೆ ತೆರೆ ಎಳೆದರು.