ಹಬ್ಬಕ್ಕಾಗಿ ತವರಿಗೆ ಬಂದ ವನಿತೆಯರೆಲ್ಲ ಬೆಳಿಗ್ಗೆಯೇ ಹೊಸ ಉಡುಗೆ ಉಟ್ಟು ದೇವಸ್ಥಾನಗಳ ಮುಂದೆ ಹಾಜರಾದರು. ದೇವಸ್ಥಾನಗಳ ಆವರಣದಲ್ಲಿ ಇರುವ ನಾಗರ ಕಲ್ಲು ಹಾಗೂ ಹುತ್ತಗಳಿಗೆ ಹಾಲೆರೆದು, ಪೂಜೆ ಸಲ್ಲಿಸಿದರು.ಶಕ್ತಿನಗರದಲ್ಲಿ ಅರಳಿ ಮರದ ಕೆಳಗೆ ಇರುವ ನಾಗರ ದೇವಸ್ಥಾನ, ಚೌಡೇಶ್ವರಿ ಕಾಲೊನಿಯ ಮಾಣಿಕೇಶ್ವರ ದೇವಸ್ಥಾನ, ಹೊಸಜೇವರ್ಗಿ ರಸ್ತೆಯ ಸಂತೋಷ ಬಡಾವಣೆಯ ದೇವಸ್ಥಾನದಲ್ಲಿ ಮಹಿಳೆಯರು ನಾಗಪ್ಪನ ಮೂರ್ತಿಗೆ ಅಲಂಕಾರ ಮಾಡಿದ್ದು ಗಮನ ಸೆಳೆಯಿತು. ಹಲವರು ಭಕ್ತಿ ಗೀತೆ ಹಾಡಿದರೆ, ಯುವತಿಯರು ಸೆಲ್ಫಿ ಕ್ಲಿಕ್ಕಿಸಿಕೊಂಡರು. ಎಂಎಸ್ಕೆ ಮಿಲ್ ರಸ್ತೆಯಲ್ಲಿರುವ ಐಟಿಐ ಕಾಲೇಜು ಹಿಂಭಾಗ, ಶಾಂತಿನಗರ ಬಡಾವಣೆ, ಗಂಗಾನಗರ, ಶಕ್ತಿನಗರ, ಬ್ರಹ್ಮಪುರ, ವಿಠಲ ನಗರ, ಲಾಳಗೇರಿ, ಐವಾನ್ ಈ ಶಾಯಿ ಪ್ರದೇಶ... ಮುಂತಾದೆಡೆ ಇರುವ ನಾಗರ ಹಾವಿನ ಹುತ್ತಗಳಿಗೂ ಜನ ಪೂಜೆ ಸಲ್ಲಿಸಿದರು. ಬೆಳಿಗ್ಗೆಯೇ ಹುತ್ತ ಹುಡುಕುತ್ತ ಕುಟುಂಬ ಸಮೇತರಾಗಿ ಬಂದ ಮಹಿಳೆಯರು ಅರಿಸಿನ, ಕುಂಕುಮ ಹಚ್ಚಿ, ಹೂಮಾಲೆ, ಅಕ್ಷತೆ ಹಾಕಿ, ಊದುಬತ್ತಿ ಬೆಳಗಿ ಪೂಜೆ ಸಲ್ಲಿಸಿದರು. ಹುತ್ತಿನ ಸುತ್ತ ದಾರ ಸುತ್ತಿದ ಕೆಲವರು ಹರಕೆ ತೀರಿಸದರು. ಇಲ್ಲಿನ ಚೌಡೇಶ್ವರಿ ಕಾಲೊನಿಯಲ್ಲಿರುವ ಮಾತಾ ಮಾಣಿಕೇಶ್ವರಿ ದೇವಸ್ಥಾನದ ಆವರಣದಲ್ಲಿ ಯುವತಿಯರು ಬೆಳಿಗ್ಗೆಯೇ ಜೋಕಾಲಿಯ ಸಂಭ್ರಮ ಶುರು ಮಾಡಿದರು. ಓರಿಗೆಯ ಗೆಳತಿಯರು, ಗೃಹಿಣಿಯರು, ಹಿರಿಯ ಸೇರಿಕೊಂಡು ಖುಷಿಪಟ್ಟರು. ಶರಣಬಸವೇಶ್ವರ ದೇವಸ್ಥಾನ ಆವರಣದಲ್ಲಿರುವ ನಾಗರ ಮೂರ್ತಿಗೆ ಪೂಜೆ ಸಲ್ಲಿಸಲು ಭಕ್ತರು ಸರದಿ ಸಾಲಿನಲ್ಲಿ ನಿಂತರು. ಉಳಿದಂತೆ,ಹಳೆ ಜೇವರ್ಗಿ ರಸ್ತೆಯ ಮುದ್ದಿ ಹನುಮಾನ್ ಮಂದಿರ, ಜ್ಯೋತಿರ್ಲಿಂಗ ದೇವಸ್ಥಾನ, ಕೋರಂಟಿ ಹನುಮಾನ್ ಮಂದಿರ, ರಾಮ ಮಂದರಿ,ಮರಗಮ್ಮ, ಶಿವಲಿಂಗ ದೇವಾಲಯಗಳಲ್ಲೂ ಜನದಟ್ಟಣೆ ಕಂಡುಬಂತು.