ಕಲಬುರಗಿ: ‘ಸಂಸತ್ ಅಧಿವೇಶನದ ವೇಳೆ ಪ್ರಧಾನಿ ನರೇಂದ್ರ ಮೋದಿ ಉತ್ತರ ಪ್ರದೇಶದಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಅವರಿಗೆ ಅಧಿವೇಶನದ ಚರ್ಚೆಗಳಿಗಿಂತ ಉತ್ತರ ಪ್ರದೇಶದಲ್ಲಿ ಪಕ್ಷಕ್ಕೆ ಮತಗಳನ್ನು ಕೊಡಿಸುವುದೇ ಚಿಂತೆಯಾಗಿದೆ’ ಎಂದು ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಟೀಕಿಸಿದರು.
ಜೇವರ್ಗಿಯಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ‘ಹಿಂದಿನ ಯಾವ ಪ್ರಧಾನಿಯೂ ಅಧಿವೇಶನವನ್ನು ನಿರ್ಲಕ್ಷಿಸಿದ್ದನ್ನು ನಾನು ಕಂಡಿಲ್ಲ’ ಎಂದು ಟೀಕಿಸಿದರು.
‘ಸರ್ಕಾರಿ ಕಾರ್ಯಕ್ರಮವನ್ನು ಮೋದಿ ಅವರು ವೈಯಕ್ತಿಕ ಪ್ರಚಾರಕ್ಕೆ ಬಳಸಿಕೊಂಡರು. ಅಲ್ಲದೆ ಪಕ್ಷದ ಕಾರ್ಯಕ್ರಮವಾಗಿ ರೂಪಿಸಿದರು. ಮೊದಲ ದಿನ ಕಲಾಪಕ್ಕೆ ಬಂದು ಹೋದವರು ನಾಪತ್ತೆಯಾದರು’ ಎಂದು ಟೀಕಿಸಿದರು.
‘ಮೋದಿ ಹಾಗೂ ಬಿಜೆಪಿಯವರು ಡಾ. ಬಿ.ಆರ್.ಅಂಬೇಡ್ಕರ್ ಅವರು ರೂಪಿಸಿದ ಸಂವಿಧಾನದ ಆಶಯಗಳನ್ನು ಬುಡಮೇಲು ಮಾಡುವ ಕಾರ್ಯದಲ್ಲಿ ತೊಡಗಿದ್ದಾರೆ. ನೆಹರೂ, ಅಂಬೇಡ್ಕರ್ ಅವರು ಪ್ರಜಾಪ್ರಭುತ್ವದ ಭದ್ರ ಬುನಾದಿಯನ್ನು ಹಾಕಿದ್ದರು’ ಎಂದರು.