ಚಿಂಚೋಳಿ: ವಯಸ್ಕ ಮತದಾನ ಪದ್ಧತಿ ಭಾರತ ದೇಶದಲ್ಲಿ ಜಾರಿಯಲ್ಲಿದೆ. ಅದರಂತೆ 18 ವರ್ಷ ವಯಸ್ಸಿನವರು ಮತದಾರರ ನೋಂದಣಿಗೆ ಅರ್ಹರಾಗಿದ್ದು, ನಿಮ್ಮ ಮನೆಯಲ್ಲಿ ಯಾರಾದರೂ ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದಿದ್ದರೆ ಆನಲೈನ್ ಮೂಲಕ ಅರ್ಜಿ ಸಲ್ಲಿಸಿ ಮತದಾರರ ನೋಂದಣಿ ಮಾಡಿಸಿಕೊಳ್ಳುವಂತೆ ತಹಶೀಲ್ದಾರ್ ಅಂಜುಮ ತಬುಸ್ಸುಮ್ ತಿಳಿಸಿದರು.
ಇಲ್ಲಿನ ಪೋಲಕಪಳ್ಳಿಯ ಆದರ್ಶ ವಿದ್ಯಾಲಯದಲ್ಲಿ ಮಂಗಳವಾರ ನಡೆದ ರಾಷ್ಟ್ರೀಯ ಮತದಾರರ ದಿನಾಚರಣೆಯಲ್ಲಿ ಅವರು ಮಕ್ಕಳಿಗೆ ಮತದಾರರ ನೋಂದಣಿಯ ಪ್ರಚಾರ ಪತ್ರಗಳನ್ನು ಮಕ್ಕಳಿಗೆ ವಿತರಿಸಿ ಮಾತನಾಡಿದರು.
ದೇಶದ ಏಳಿಗೆಗೆ ಮತದಾನ ಅತ್ಯವಶ್ಯಕ. ಪ್ರತಿಯೊಬ್ಬರು ಮತದಾನ ಮಾಡುವ ಮೂಲಕ ಚುನಾವಣೆಗಳನ್ನು ಯಶಸ್ವಿಗೊಳಿಸಬೇಕು ಮತ್ತು ನಿಮ್ಮ ಪ್ರತಿನಿಧಿಯನ್ನು ನೀವೇ ಆರಿಸಿಕೊಳ್ಳಬೇಕೆಂದು ಅವರು ಕರೆ ನೀಡಿದರು.
ಭಾರತ ಚುನಾವಣಾ ಆಯೋಗ ಮತ್ತು ರಾಜ್ಯ ಚುನಾವಣಾ ಆಯೋಗದ ಕುರಿತು ಮಾಹಿತಿ ನೀಡಿದ ಪ್ರಾಂಶುಪಾಲ ನಾಗಶೆಟ್ಟಿ ಭದ್ರಶೆಟ್ಟಿ ಅವರು ಪ್ರಜಾಪ್ರಭುತ್ವದಲ್ಲಿ ಚುನಾವಣೆಗಳ ಮಹತ್ವ ವಿವರಿಸಿದರು.
ಎಸ್ಡಿಎಂಸಿ ಅಧ್ಯಕ್ಷ ಲಕ್ಷ್ಮಣ ಅವುಂಟಿ ಲೋಕಸಭೆ, ರಾಜ್ಯ ಸಭೆ, ವಿಧಾನ ಸಭೆ, ವಿಧಾನ ಪರಿಷತ್ ಮತ್ತು ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಮತ್ತು ಗ್ರಾಮ ಪಂಚಾಯಿತಿಗಳು ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಬಗ್ಗೆ ಮಾಹಿತಿ ನೀಡಿದರು.
ಗ್ರೇಡ್– 2 ತಹಶೀಲ್ದಾರ್ ವೆಂಕಟೇಶ ದುಗ್ಗನ್, ಶಿರಸ್ತೇದಾರ ಸುಭಾಷ ನಿಡಗುಂದಿ, ಕಂದಾಯ ನಿರೀಕ್ಷಕ ರವಿ ಪಾಟೀಲ, ಶೋಯೇಬ್, ಮಕ್ದುಮ್, ಮಲ್ಲಿಕಾರ್ಜುನ ಮರಪಳ್ಳಿ ಇದ್ದರು.
ಇದೇ ವೇಳೆ ಮಕ್ಕಳಿಗೆ ಮತದಾರರ ಪ್ರತಿಜ್ಞಾವಿಧಿ ಭೋಧಿಸಿದ ತಹಶೀಲ್ದಾರ ಅಂಜುಮ ತಬಸ್ಸುಮ ನಂತರ ಮಕ್ಕಳು ಬಿಡಿಸಿದ ಮತದಾರರ ದಿನಾಚರಣೆಯ ಮಹತ್ವ ಕುರಿತ ಹಾಗೂ ಕೋವಿಡ್ ಮಾರ್ಗಸೂಚಿಗಳ ಮಹತ್ವ ಸಾರುವ ಚಿತ್ರಗಳ ಪ್ರದರ್ಶನ ವೀಕ್ಷಿಸಿ ಮೆಚ್ಚುಗೆ ಸೂಚಿಸಿದರು.