ಕಲಬುರ್ಗಿ: ಭೀಮಾ ನದಿಯ ಪ್ರವಾಹದಿಂದ ಮನೆ ಕಳೆದುಕೊಂಡ ಜಿಲ್ಲೆಯ 15 ಸಾವಿರಕ್ಕೂ ಹೆಚ್ಚು ಜನರಿಗೆ ಇನ್ನೂ ಸೂಕ್ತ ಪರಿಹಾರ ಸಿಕ್ಕಿಲ್ಲ. ಮೂರು ದಿನಗಳ ಹಿಂದಷ್ಟೇ ಪರಿಹಾರ ವಿತರಣೆಗೆ ಜಿಲ್ಲಾಧಿಕಾರಿ ಚಾಲನೆ ನೀಡಿದ್ದರೂ, ಅರ್ಧದಷ್ಟು ಫಲಾನುಭವಿಗಳನ್ನು ತಲುಪಿಲ್ಲ.
ಪ್ರವಾಹದಿಂದ ತತ್ತರಿಸಿದ ಬಹುತೇಕ ಸಂತ್ರಸ್ತರಿಗೆ ಈ ಬಾರಿ ದೀಪಾವಳಿ ‘ಬೆಳಕು’ ನೀಡುವುದೇ ಅನುಮಾನ. ವರುಣನ ಆರ್ಭಟಕ್ಕೆ, ಭೀಮೆಯ ಅಟ್ಟಹಾಸಕ್ಕೆ ಅವರೆಲ್ಲ ನಲುಗಿ ಹೋಗಿದ್ದಾರೆ.
ಪ್ರವಾಹ ಬಂದು ಹೋದ ಮೇಲಿನ ಹಳ್ಳಿಗಳ ಸ್ಥಿತಿ ಮತ್ತಷ್ಟು ದಾರುಣವಾಗಿದೆ. ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋದ ಮನೆಯ ಗೋಡೆ, ಬಾಗಿಲು, ಕಿಟಕಿಗಳು ದುರಸ್ತಿ ಮಾಡದ ಸ್ಥಿತಿ ತಲುಪಿವೆ. ಬಿರುಕು ಬಿಟ್ಟ ಗೋಡೆಗಳ ಮೇಲೆ ತಗಡಿನ ಚಪ್ಪರ ಹಾಕಿ ಬದುಕುವಂತಾಗಿದೆ. ಮನೆಯಲ್ಲಿ ಕೂಡಿಟ್ಟಿದ್ದ ಆಹಾರ ಧಾನ್ಯಗಳೆಲ್ಲ ಭೀಮೆಯ ಪಾಲಾಗಿವೆ. ಅಳಿದುಳಿದ ಬಟ್ಟೆ, ಬರೆ, ಪಾತ್ರೆ, ಗೃಹೋಪಯೋಗಿ ವಸ್ತುಗಳನ್ನು ಹೊಂದಿಸಿಕೊಳ್ಳುವಲ್ಲಿ ಜನ ನಿರತರಾಗಿದ್ದಾರೆ. ಹರಿದ, ಹಳೆ ಬಟ್ಟೆಗಳಿಗೆ ತೇಪೆ ಹಚ್ಚಿಕೊಳ್ಳುವ ಸ್ಥಿತಿ ಬಂದಿದೆ. ಮನೆಯೊಳಗಿನ ನೆಲಹಾಸು ಕಿತ್ತುಹೋಗಿದೆ. ಬಾಗಿ ನಿಂತ ವಿದ್ಯುತ್ ಕಂಬಗಳು ಈಗಲೋ ಆಗಲೋ ಬೀಳುವಂತಿವೆ.
ಅತ್ತ ಹೊಲಗಳಿಗೆ ಹೋದರೂ ಎಲ್ಲಿ ಇನ್ನೂ ದಯನೀಯ ಸ್ಥಿತಿ. ದಟ್ಟ ಹಸಿರು ಹೊದ್ದು ಮೈನೆರೆದು ನಿಂತಿದ್ದ ಕಬ್ಬು, ಬಾಳೆ, ತೊಗರಿ, ಹತ್ತಿ ಎಲ್ಲ ಬೆಳೆಗಳೂ ಈಗ ಕೊಳೆತು ಹೋಗಿವೆ. ಮುಂಗಾರು ಚೆನ್ನಾಗಿ ಬಂದಿದ್ದರಿಂದ ಹುಲುಸಾಗಿ ಬೆಳೆದಿದ್ದ ಪೈರಿನ ‘ಅಸ್ತಿಪಂಜರ’ಗಳು ಮಾತ್ರ ರೈತರ ಪಾಲಿಕೆ ಉಳಿದಿವೆ.
ರೊಕ್ಕ ತುಗೊಂಡ ಮಾಡೂದೇನ್ ಬಿಡ್ರಿ:‘ಗಂಡ– ಹೆಂಡತಿ ದುಡಿದು ಜ್ವಾಳಾ– ಕಾಳು ಮಾಡಿಕೊಂಡಿದ್ದೀವ್ರಿ. ಏಕಾಏಕಿ ನೀರು ಬಂದು ನಮ್ಮ ಎರಡು ಎತ್ತು, ಚಕ್ಕಡಿ, ನಾಲ್ಕು ಆಡು ತೇಲಿ ಹೋದವು. ಮನ್ಯಾಗಿನ ಚಿಲ್ಲರ ರೊಕ್ಕ, ಬಟ್ಟಿ– ಬರಿ ಏನೂ ಉಳಿದಿಲ್ಲ. ಊರ್ ಸಾಲ್ಯಾಗ್ ಒಂದು ವಾರ ಇಟ್ಟಿದ್ದರು. ಈಗ ಹೊಳ್ಳಿ ಬಂದ ನೋಡಿದ್ರ ಎಲ್ಲಾ ಬಟಾ ಬಯಲಾಗೇತಿ. ಎತ್ತು ಇಲ್ಲ, ಚಕ್ಕಡಿ ಇಲ್ಲ, ಹೊಲಾನೂ ಹಾಳಾತು, ಮನೀನು ಬೀಳಾತದ. ಅಧಿಕಾರಿಗೋಳ್ ಬಂದು ಸಮಾಧಾನ ಹೇಳಿ ಹೋಗ್ಯಾರ. ರೊಕ್ಕ ಕೊಡತಾರಂತ ಮನಿ ಕಟ್ಟಿಸಿಕೊಳ್ಳಾಕ್. ರೊಕ್ಕ ತಗೊಂಡ್ ಏನ್ ಬಡಕೊಳ್ಳೂದ್ ಬಿಡ್ರಿ. ಮಕ್ಕಳ ಬಾಯಾಗ್ ಮಣ್ಣ ಹಾಕಿದಾ ದೇವರ...’ ಪ್ರವಾಹದಿಂದ ಸಂಪೂರ್ಣ ಆವೃತವಾಗಿದ್ದ ಫಜಲಪುರ ತಾಲ್ಲೂಕಿನ ಬಂಕಲಗಾ ಗ್ರಾಮದ ಸಿದ್ದಮ್ಮ ಜಮಾದಾರ ಹೀಗೆ ಬೇಸರದಿಂದಲೇ ಹೇಳಿದರು.
‘ಮಂತ್ರಿಗೋಳ್ ಹೆಲಿಕ್ಯಾಪ್ಟರ್ನ್ಯಾಗ್ ಬಂದ ಹೋದರೇನ್ ಗೊತ್ತಾಕ್ಕದ. ಮುಳ್ಳು, ಕಲ್ಲು, ಕಾಜು, ಕೊಂಪಿ, ಹುಳಾ ಹುಪ್ಪಡಿ ಊರ್ ತುಂಬ ಆಗ್ಯಾವ್. ಮ್ಯಾಲ್ ಹಾರಾಡಿದ್ರ ಇದು ಹೆಂಗ್ ಗೊತ್ತಾಕ್ಕದರಿ’ ಎನ್ನುವುದು ಚಿತ್ತಾಪುರ ತಾಲ್ಲೂಕಿನ ಕೋಬಾಳ ಗ್ರಾಮದ ವೈಜಮ್ಮ ಅವರ ಪ್ರಶ್ನೆ.
ಸಂತ್ರಸ್ತರ ಮರೆತು ಮತದಾರರ ಬೆನ್ನು ಹತ್ತಿದ ಸರ್ಕಾರ: ‘ಈಗ ಉಪಚುನಾವಣೆ ನಡೆಯುತ್ತಿರುವ ಕಾರಣ ಇಡೀ ರಾಜ್ಯ ಸರ್ಕಾರ ಹಾಗೂ ಜನಪ್ರತಿನಿಧಿಗಳಿಗೆ ಅದುವೇ ಮುಖ್ಯವಾಗಿದೆ. ಮುಖ್ಯಮಂತ್ರಿ ಅವರಿಗೆ ಈಗ ಕಾಣಿಸುತ್ತಿರುವುದು ಮತದಾರರೇ ಹೊರತು ಸಂತ್ರಸ್ತರಲ್ಲ’ ಎಂದು ಬೇಸರಗೊಂಡರು ಹೊನ್ನಗುಂಟದ 93ರ ಹಿರಿಯ ಖೇಮುಸಿಂಗ್.
ಮುಖ್ಯಮಂತ್ರಿ ಯಡಿಯೂರಪ್ಪ ಅಕ್ಟೋಬರ್ 21ರಂದು ಪ್ರವಾಹವದ ವೈಮಾನಿಕ ಸಮೀಕ್ಷೆ ನಡೆಸಿದರು. ಮರುದಿನವೇ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಅವರು ‘ಪ್ರಕಟಣೆ’ ನೀಡಿ, ಸಂತ್ರಸ್ತರು ಮನೆಗಳನ್ನು ದುರಸ್ತಿ ಮಾಡಿಕೊಳ್ಳಲು ತಕ್ಷಣಕ್ಕೆ ₹ 10 ಸಾವಿರ ಪರಿಹಾರ ನೀಡಬೇಕು ಎಂದು ಹೇಳಿದ್ದರು. ಇದಾಗಿ ಎರಡು ವಾರದ ನಂತರ ₹ 20 ಕೋಟಿ ಬಿಡುಗಡೆ ಮಾಡಿದ್ದಾರೆ.
‘ಶೇ 40ರಷ್ಟು ಮಂದಿಗೆ ಪರಿಹಾರ ಕೊಟ್ಟಿದ್ದೇವೆ’
ಜಿಲ್ಲೆಯ ಪ್ರವಾಹ ಸಂತ್ರಸ್ತರ ನೆರವಿಗಾಗಿ ಜಿಲ್ಲಾಡಳಿತಕ್ಕೆ ಶುಕ್ರವಾರ (ಅಕ್ಟೋಬರ್ 30) ₹ 20 ಕೋಟಿ ಜಮೆ ಆಗಿದೆ. ಈ ಬಗ್ಗೆ ಮಂಗಳವಾರ (ನ. 3) ಅಧಿಕಾರಿಗಳ ಸಭೆ ಕರೆದಿದ್ದು, ಪರಿಹಾರ ಮೊತ್ತ ಹಂಚುವ ಬಗ್ಗೆ ಅಂತಿಮ ಅಂಕಿ ಅಂಶ ಸಿಗಲಿದೆ. ಪ್ರಾಥಮಿಕ ಹಂತದಲ್ಲಿ ಜಿಲ್ಲೆಯಲ್ಲಿ 15 ಸಾವಿರ ಜನರನ್ನು ಪರಿಹಾರಕ್ಕೆ ಪಟ್ಟಿ ಮಾಡಲಾಗಿದೆ. ಈಗಾಗಲೇ 6400 ಜನರಿಗೆ ಹಣ ಸಂದಾಯ ಮಾಡಿದ್ದೇವೆ. ಇನ್ನೂ ಅಂದಾಜು 9 ಸಾವಿರ ಜನ ಉಳಿದಿರಬಹುದು. ಮತ್ತೊಂದು ಸಭೆ ಕರೆದು ಅವರಿಗೂ ಪರಿಹಾರದ ಹಣ ನೀಡಲಾಗುವುದು.
–ವಿ.ವಿ. ಜೋತ್ಸ್ನಾ, ಜಿಲ್ಲಾಧಿಕಾರಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.