ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗದಲ್ಲಿ ರೈತರಿಗೆ ರಾತ್ರಿ ಬದಲು ಹಗಲು ಹೊತ್ತಿನಲ್ಲಿ ನಿರಂತರ 12 ಗಂಟೆ ತ್ರಿಫೇಸ್ ವಿದ್ಯುತ್ ನೀಡಬೇಕು ಎಂದುಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ ಆಗ್ರಹಿಸಿದರು.
‘ನವೆಂಬರ್ನಲ್ಲಿ ಅತಿವೃಷ್ಟಿಯಿಂದ ಬರಬೇಕಿದ್ದ ಬೆಳೆ ರೈತರ ಕೈಗೆ ಬಂದಿಲ್ಲ. ಇದರಿಂದ ಸಾಕಷ್ಟು ಹಾನಿ ಆಗಿದೆ. ಈಗ ಬೆಳೆಯನ್ನು ಉಳಿಸಿಕೊಳ್ಳಲು ವಿದ್ಯುತ್ ಬೇಕಾಗಿದ್ದು, ಜೆಸ್ಕಾಂನವರು ರಾತ್ರಿ ವೇಳೆ ಮಾತ್ರ ತ್ರಿಫೇಸ್ ವಿದ್ಯುತ್ ಪೂರೈಸುತ್ತಾರೆ. ಆ ಸಂದರ್ಭದಲ್ಲಿ ವಿಷಕಾರಿ ಹುಳು, ಹುಪ್ಪಡಿಗಳು ರೈತರ ಜೀವಕ್ಕೆ ಹಾನಿ ಮಾಡುವ ಸಂಭವವಿದೆ. ಆದ್ದರಿಂದ ಹಗಲು ಹೊತ್ತಿನಲ್ಲಿ ಪೂರೈಸಬೇಕು’ ಎಂದು ಅವರು ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಚಿಂಚೋಳಿ ತಾಲೂಕಿನಲ್ಲಿ ನೂರಾರು ವಿದ್ಯುತ್ ಕಂಬಗಳು ನೆಲಕ್ಕೆ ಅಪ್ಪಳಿಸುವಂತಹಸ್ಥಿತಿಗೆ ಬಂದಿವೆ.ಅವುಗಳನ್ನು ದುರಸ್ತಿ ಮಾಡಬೇಕು.ಕಾಳಗಿಯಮುಕರಂಬಾಗ್ರಾಮದಲ್ಲಿಕೆಳಭಾಗದಲ್ಲಿ ವಿದ್ಯುತ್ ತಂತಿ ಇದ್ದುದರಿಂದ ಅಲ್ಲಿ ನೀರು ಬಿಡುತ್ತಿದ್ದ ರೈತ ವಿದ್ಯುತ್ ಸ್ಪರ್ಶದಿಂದ ಸಾವನ್ನಪ್ಪಿದ್ದಾರೆ. ಅವರ ಕುಟುಂಬಕ್ಕೆ ಜೆಸ್ಕಾಂ ಪರಿಹಾರ ನೀಡಬೇಕು’ ಎಂದರು.
‘ಟಿ.ಸಿ. ಬ್ಯಾಂಕ್ ಇದೆಯೆಂದು ಅಧಿಕಾರಿಗಳು ಹೇಳುತ್ತಾರೆ. ಆದರೆ, ಕರಜಗಿ ಗ್ರಾಮದಲ್ಲಿ 18 ರೈತರು ಟಿ.ಸಿ.ಅಳವಡಿಸಿಕೊಂಡಿದ್ದರು. ಅದು ಕೆಟ್ಟು 15 ದಿನಗಳಾದರೂ ಹೊಸ ಟಿ.ಸಿ. ಅಳವಡಿಸಿಲ್ಲ’ ಎಂದು ಆರೋಪಿಸಿದರು.
ರೈತರಿಗೆ ವಿದ್ಯುತ್ ಕೊಡಲು ಸಮಯ ನಿಗದಿಪಡಿಸಿದ್ದಾಗಿ, ಆರು ಗಂಟೆ ವಿದ್ಯುತ್ ಕೊಡುತ್ತಿದ್ದೇವೆಂದು ಜೆಸ್ಕಾಂ ಅಧಿಕಾರಿಗಳು ಹೇಳುತ್ತಾರೆ. ಆದರೆ, ಅದೇ ಸಮಯದಲ್ಲಿ ಎಲ್ಸಿ ತೆಗೆದುಕೊಂಡು ಕೆಲಸ ಮಾಡಿಸುತ್ತಾರೆ. ಇದರಿಂದ ಆರು ಗಂಟೆ ಸತತ ವಿದ್ಯುತ್ ಕೊಡಲು ಸಾಧ್ಯವಾಗುವುದಿಲ್ಲ. ಬೇರೆ ಸಂದರ್ಭದಲ್ಲಿ ದುರಸ್ತಿ ಕಾರ್ಯ ಕೈಗೆತ್ತಿಕೊಳ್ಳಬೇಕು ಎಂದರು.
ಜಿಲ್ಲೆಯ ಹಲವಾರು ರೈತರು ಅಕ್ರಮ ಸಕ್ರಮ, ಗಂಗಾ ಕಲ್ಯಾಣ ಹಾಗೂ ಎಸ್ಸಿಪಿ ಯೋಜನೆಯಡಿ ನೀರಾವರಿಗಾಗಿ ವಿದ್ಯುತ್ ಸಂಪರ್ಕಕ್ಕೆ ಅರ್ಜಿ ಸಲ್ಲಿಸಿ ವರ್ಷಗಳು ಕಳೆದರೂ ಇಲ್ಲಿಯವರೆಗೆ ವಿದ್ಯುತ್ ಸಂಪರ್ಕ ಕಲ್ಪಿಸಿಲ್ಲ. ರೈತರು 1 ಕಿ.ಮೀ. ದೂರದಿಂದ ಖುಲ್ಲಾ ವೈರ್ ಹಾಕಿ ನೀರಾವರಿ ತೋಟಗಳಿಗೆ ಕರೆಂಟ್ ಪಡೆಯುವ ನಿಯಮ ಕೈಬಿಟ್ಟು ಅರ್ಜಿ ಹಾಕಿದ ಎಲ್ಲ ರೈತರಿಗೆ ಕೂಡಲೇ ವಿದ್ಯುತ್ ಕಲ್ಪಿಸಿಕೊಡುವ ನಿಯಮವನ್ನು ಜಾರಿಗೆ ತರಬೇಕು. ಗಂಗಾ ಕಲ್ಯಾಣ ಯೋಜನೆ ಮತ್ತು ಅಕ್ರಮ ಸಕ್ರಮ ರೈತರ ಅರ್ಜಿಗಳನ್ನು ಇತ್ಯರ್ಥಗೊಳಿಸಬೇಕು ಎಂದು ಒತ್ತಾಯಿಸಿದರು. ಪ್ರಮುಖರಾದ ಪಾಂಡುರಂಗ ಮಾವಿನಕರ, ಅಲ್ತಾಫ್ ಇನಾಮದಾರ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.