ಮೂವರು ಅಧಿಕಾರಿಗಳ ಪೈಕಿ ಇಬ್ಬರು ಇನ್ನೂ ಕಲಬುರಗಿಯಲ್ಲೇ ಸೇವೆಯಲ್ಲಿದ್ದಾರೆ. ಪರೀಕ್ಷಾ ಅಕ್ರಮದಲ್ಲಿ ಮೂವರ ಪಾತ್ರವೂ ವಿಭಿನ್ನವಾಗಿದೆ ಎಂದು ಮೂಲಗಳು ಹೇಳುತ್ತವೆ. ಪರೀಕ್ಷೆ ನಡೆದ ದಿನ (2021 ಅಕ್ಟೋಬರ್ 3) ಜ್ಞಾನಜ್ಯೋತಿ ಶಾಲೆಯ ಪರೀಕ್ಷಾ ಕೇಂದ್ರಕ್ಕೆ ಒಬ್ಬ ಡಿವೈಎಸ್ಪಿ ಕಸ್ಟೋಡಿಯನ್ ಜವಾಬ್ದಾರಿಗೆ ನಿಯೋಜನೆಗೊಂಡಿದ್ದರು. ಆದರೆ, ಪರೀಕ್ಷೆ ಆರಂಭವಾದ ಕೆಲವೇ ನಿಮಿಷಗಳಲ್ಲಿ, ಸಂಬಂಧಿಕರು ತೀರಿಕೊಂಡಿದ್ದಾರೆ ಎಂದು ಹೇಳಿ ಹೋದರು. ಅವರ ಬದಲಿಗೆ ಬೇರೊಬ್ಬ ಡಿವೈಎಸ್ಪಿ ಕಸ್ಟೋಡಿಯನ್ ಆಗಿ ಬಂದರು. ಇಬ್ಬರೂ ಅಕ್ರಮಕ್ಕೆ ಸಾಥ್ ನೀಡುವ ಉದ್ದೇಶದಿಂದಲೇ ಒಬ್ಬರಾದ ಮೇಲೆ ಒಬ್ಬರು ಜವಾಬ್ದಾರಿ ನಿರ್ವಹಿಸುವ ಉಪಾಯ ಮಾಡಿದ್ದಾರೆ. ಅಲ್ಲದೇ, ನಗರದ ಠಾಣೆಯೊಂದರ ಇನ್ಸ್ಪೆಕ್ಟರ್ ಕೂಡ ಇವರಿಬ್ಬರೊಂದಿಗೆ ಕೈ ಜೋಡಿಸಿದ್ದಾರೆಎಂಬ ಗುಮಾನಿ ತನಿಖಾಧಿಕಾರಿಗಳಿಗೆ ಬಂದಿದೆ ಎನ್ನುತ್ತವೆ ಮೂಲಗಳು.