ಚಿಂಚೋಳಿ: ತಾಲ್ಲೂಕಿನಲ್ಲಿ ಅಕ್ರಮ ಗಾಂಜಾ ಬೇಸಾಯದ ವಿರುದ್ಧ ಸಮರ ಸಾರಿದ ಚಿಂಚೋಳಿಯ ಪೊಲೀಸರು, ಭಾನುವಾರ 2.23 ಕ್ವಿಂಟಲ್ ಗಾಂಜಾ ಜಪ್ತಿ ಮಾಡಿ ಆರೋಪಿಯನ್ನು ಬಂಧಿಸಿದ್ದಾರೆ.
ತಾಲ್ಲೂಕಿನ ಧರಿ ತಾಂಡಾದ ನಿವಾಸಿ ಧನಸಿಂಗ್ ರಾಮಚಂದ್ರ ರಾಠೋಡ ಅವರ ಸಜ್ಜನಕೊಳ್ಳ ತಾಂಡಾ ಬಳಿಯ ತೊಗರಿ ಹೊಲದಲ್ಲಿ 2.23 ಕ್ವಿಂಟಲ್ ಗಾಂಜಾ ಜಪ್ತಿ ಮಾಡಲಾಗಿದೆ. ಧರಿ ತಾಂಡಾದಲ್ಲಿ ಆರೋಪಿ ಧನಸಿಂಗ್ ರಾಮಚಂದ್ರ ರಾಠೋಡ ಮನೆಯ ಮುಂದೆ ಹಾಗೂ ಹಿಂದೆ ಬೆಳೆದ 62 ಕೆ.ಜಿ ಗಾಂಜಾ ಬೆಳೆದುದನ್ನು ಶುಕ್ರವಾರ ಪತ್ತೆ ಹಚ್ಚಿದ್ದಾರೆ.
ಎರಡು ಪ್ರಕರಣ ಸೇರಿ ಆರೋಪಿಯಿಂದ 2.85 ಕ್ವಿಂಟಲ್ ಗಾಂಜಾ ಜಪ್ತಿ ಮಾಡಿದಂತಾಗಿದೆ. ಇದರ ಮೌಲ್ಯ ಸುಮಾರು ₹ 13 ಲಕ್ಷ ಎಂದು ಚಿಂಚೋಳಿಯ ಪೊಲೀಸರು ತಿಳಿಸಿದ್ದಾರೆ.
ಡಿವೈಎಸ್ಪಿ ವೀರಭದ್ರಯ್ಯ ನೇತೃತ್ವದಲ್ಲಿ ಸರ್ಕಲ್ ಇನ್ಸ್ಪೆಕ್ಟರ್ ಮಹಾಂತೇಶ ಪಾಟೀಲ, ಸಬ್ ಇನ್ಸ್ಪೆಕ್ಟರ ರಾಜಶೇಖರ ರಾಠೋಡ ಮತ್ತು ಸಿಬ್ಬಂದಿ ದಾಳಿ ನಡೆಸಿ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಚಿಂಚೋಳಿ ಠಾಣೆಯಲ್ಲಿ ಎರಡೂ ಪ್ರಕರಣ ದಾಖಲಾಗಿವೆ.
ಈಚೆಗೆ ಜಿಲ್ಲೆಯ ಕಾಳಗಿ ಪಟ್ಟಣದಲ್ಲಿ ಕುರಿ ಶೆಡ್ನಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಗಾಂಜಾವನ್ನು ಬೆಂಗಳೂರಿನ ಪೊಲೀಸರು ಪತ್ತೆ ಹಚ್ಚಿ ಆರೋಪಿಯನ್ನು ಬಂಧಿಸಿದ ನಂತರ ಎಚ್ಚೆತ್ತುಕೊಂಡ ಪೊಲೀಸರು ತಾಲ್ಲೂಕಿನಲ್ಲಿ ದಾಳಿ ಮುಂದುವರಿಸಿದ್ದಾರೆ.
ಅಕ್ರಮ ಗಾಂಜಾ ಬೇಸಾಯಕ್ಕೆ ಸಂಬಂಧಿಸಿದಂತೆ ತಾಲ್ಲೂಕಿನಲ್ಲಿ ಈವರೆಗೆ 5 ಪ್ರಕರಣ ಬೇಧಿಸಿದ್ದಾರೆ. ಕುಂಚಾವರಂ ಠಾಣೆ ವ್ಯಾಪ್ತಿಯಲ್ಲಿ ಮೂರು ಮತ್ತು ಚಿಂಚೋಳಿ ಠಾಣೆ ವ್ಯಾಪ್ತಿಯಲ್ಲಿ ಎರಡು ಪ್ರಕರಣ ಬೇಧಿಸಿದ್ದಾರೆ. ಒಟ್ಟು ₹ 19 ಲಕ್ಷ ಮೌಲ್ಯದ ಗಾಂಜಾ ಜಪ್ತಿ ಮಾಡಿಕೊಂಡು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.