ಚಿಂಚೋಳಿ: ತಾಲ್ಲೂಕಿನ ರಾಯಕೋಡ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯ ವಿಜ್ಞಾನ ಶಿಕ್ಷಕ ಲಿಂಗಾನಂದ ಅವರ ವರ್ಗಾವಣೆ ವಿರೋಧಿಸಿ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದ ಘಟನೆ ಶುಕ್ರವಾರ ನಡೆದಿದೆ.
ಶಾಲೆಯಲ್ಲಿ 8,9 ಮತ್ತು 10ನೇ ತರಗತಿ ಸೇರಿ 130ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದಾರೆ. ಇವರಿಗೆ ಪಾಠ ಮಾಡಲು ಮುಖ್ಯಶಿಕ್ಷಕ ಸೇರಿ ಒಟ್ಟು 8 ಶಿಕ್ಷಕರಿದ್ದಾರೆ. ಮುಖ್ಯಶಿಕ್ಷಕ ಅನಧಿಕೃತವಾಗಿ ಗೈರಾಗುತ್ತಿದ್ದಾರೆ. ತೋಟಗಾರಿಕಾ ಶಿಕ್ಷಕ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೆಶಕರ ಕಚೇರಿಗೆ ನಿಯೋಜನೆ ಮೇಲೆ ಹೋಗಿದ್ದಾರೆ. ಈಗ ವಿಜ್ಞಾನ ಶಿಕ್ಷಕರನ್ನು ವರ್ಗಾಯಿಸಲಾಗಿದೆ. ನಾಳೆ ಗಣಿತ ಶಿಕ್ಷಕರು ಬೇರೆ ಕಡೆ ಸ್ಥಳ ಪಡೆಯುವ ಸಾಧ್ಯತೆಯಿದೆ ಎಂದು ಶಿಕ್ಷಣ ಪ್ರೇಮಿ ಬ್ರಹ್ಮಾನಂದರೆಡ್ಡಿ ಗೋಟೂರು ತಿಳಿಸಿದರು.
ಶೈಕ್ಷಣಿಕ ವರ್ಷದ ಮಧ್ಯದಲ್ಲಿ ಶಿಕ್ಷಕರು ವರ್ಗವಾದರೆ ನಮ್ಮ ಗತಿ ಏನೆಂದು ಪ್ರಶ್ನಿಸಿದ ಮಕ್ಕಳು ಯಾವುದೇ ಕಾರಣಕ್ಕೂ ವರ್ಗವಾದ ಶಿಕ್ಷಕರಿಗೆ ಶಾಲೆಯಿಂದ ಬಿಡುಗಡೆ ಮಾಡಬಾರದು ಎಂದು ಆಗ್ರಹಿಸಿ ತರಗತಿ ಬಹಿಷ್ಕರಿಸಿದರು. ವಿದ್ಯಾರ್ಥಿಗಳಾದ ವಿಕಾಸ, ಮಲ್ಲಪ್ಪ, ಭುವನೇಶ್ವರಿ, ಭಾಗ್ಯಶ್ರೀ ಮೊದಲಾದವರು ಇದ್ದರು.