ಶಹಾಬಾದ್: ಬಿಸಿಲಿನ ತಾಪಕ್ಕೆ ನಲುಗಿಹೋಗಿದ್ದ ನಗರವಾಸಿಗಳಿಗೆ ಗುರುವಾರ ಮಧ್ಯಾಹ್ನ ಗಾಳಿ, ಗುಡುಗು ಸಹಿತ ಮಳೆ ಸುರಿದ ಪರಿಣಾಮ ತುಸು ತಂಪಿನ ವಾತಾವರಣ ಅನುಭವಿಸಿದರು. ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಮಳೆ ನಿರಂತರವಾಗಿ ಸುರಿಯಿತು.
ನಗರದ ಪ್ರಮುಖ ರಸ್ತೆಗಳಲ್ಲಿ ನೀರು ನಿಂತುಕೊಂಡಿತು. ನಗರದ ಬಸವೇಶ್ವರ ವೃತ್ತದಿಂದ ಶಾಸ್ತ್ರೀ ವೃತ್ತದವರೆಗಿನ ರಸ್ತೆಯ ಮೇಲೆ ಮೊಳಕಾಲಿನಷ್ಟು ನೀರು ತುಂಬಿಕೊಂಡಿತ್ತು. ಚರಂಡಿಯಲ್ಲಿನ ನೀರು ಮತ್ತು ತ್ಯಾಜ್ಯ ವಸ್ತುಗಳು ರಸ್ತೆಯ ಮೇಲೆ ಹರಿದು ಗಲೀಜು ವಾತಾವರಣ ಸೃಷ್ಟಿಯಾಯಿತು. ಜಿಇ ಕಾಲೊನಿಯಲ್ಲಿ ಒಣಗಿದ ಮರಗಳ ಕೊಂಬೆಗಳು ಅಲ್ಲಲ್ಲಿ ಮುರಿದು ಬಿದ್ದರುವುದು ಕಂಡು ಬಂದಿತು.
ಆಲಿಕಲ್ಲು ಮಳೆ
ಆಳಂದ: ತಾಲ್ಲೂಕಿನ ವಿವಿಧೆಡೆ ಗುರುವಾರ ಮಧ್ಯಾಹ್ನ ಆಲಿಕಲ್ಲು ಸಮೇತ ಜೋರಾದ ಮಳೆ ಸುರದಿದೆ.
ಆಳಂದ ಪಟ್ಟಣದಲ್ಲಿ ಗುಡುಗು ಸಿಡಿಲಿನ ಆರ್ಭಟದೊಂದಿಗೆ ಸುರಿದ ಮಳೆಗೆ ಪಟ್ಟಣದ ಮುಖ್ಯರಸ್ತೆ ಮೇಲೆ ಹಾಗೂ ಚರಂಡಿಗಳು ಮಳೆ ನೀರು ತುಂಬಿ ಹರದಿವೆ. ಅರ್ಧ ಗಂಟೆಗೂ ಹೆಚ್ಚುಕಾಲ ಮಳೆಯು ಬಂತು. ಇದರಿಂದ ವಿದ್ಯುತ್ ವ್ಯತ್ಯಯವಾಯಿತು.
ತಾಲ್ಲೂಕಿನ ಹಿರೋಳಿ, ಸರಸಂಬಾ, ಭೀಮಪುರ, ಹೊನ್ನಳಿ, ಹೆಬಳಿ, ಮಟಕಿ, ಹೊಸಳ್ಳಿ, ಸಾಲೇಗಾಂವ, ಕೊಡಲ ಹಂಗರಗಾ, ಕೊರಳ್ಳಿ, ಪಡಸಾವಳಿ, ತೀರ್ಥ , ಮುನ್ನಹಳ್ಳಿ ಗ್ರಾಮದಲ್ಲೂ ಮಳೆ ಜೋರಾಗಿ ಸುರದಿದೆ. ಹಲವಡೆ ಆಲಿಕಲ್ಲು ಮಳೆಗೆ ಮಾವಿನ ಹಣ್ಣು, ಕಲ್ಲಂಗಡಿ ಹಣ್ಣಿನ ಬೆಳೆಗೆ ಹಾನಿಯಾದ ವರದಿಯಾಗಿದೆ.