ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳಂದ: ಬಾಲಕಿ ಮೇಲೆ ಅತ್ಯಾಚಾರ ಎಸಗಿ ಕೊಲೆ

Last Updated 2 ನವೆಂಬರ್ 2022, 7:28 IST
ಅಕ್ಷರ ಗಾತ್ರ

ಆಳಂದ: ಬಯಲು ಬಹಿರ್ದೆಸೆಗೆ ಹೋಗಿದ್ದ ಬಾಲಕಿ ಮೇಲೆ ಅತ್ಯಾಚಾರವೆಸಗಿ, ಕೊಲೆ ಮಾಡಿದ ಘಟನೆ ಆಳಂದ ತಾಲ್ಲೂಕಿನ ಗ್ರಾಮವೊಂದರಲ್ಲಿ ಮಂಗಳವಾರ ನಡೆದಿದೆ.

‘ಗ್ರಾಮದ ಹೊರವಲಯದ ಕಬ್ಬಿನ ಗದ್ದೆಯಲ್ಲಿ ಬಾಲಕಿಯ ಮೃತದೇಹ ಪತ್ತೆಯಾಗಿದ್ದು, ಅತ್ಯಾಚಾರ ನಡೆಸಿ ಕೊಲೆ ಮಾಡಲಾಗಿದೆ ಎಂಬುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ. ಅತ್ಯಾಚಾರ ಮತ್ತು ಕೊಲೆ ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ತನಿಖೆ ಕೈಗೊಳ್ಳಲಾಗಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ಅಫಜಲಪುರ ತಾಲ್ಲೂಕಿನ ಗ್ರಾಮವೊಂದರ ಬಾಲಕಿಯು ಆಳಂದ ತಾಲ್ಲೂಕಿನ ಸಂಬಂಧಿಕರ ಮನೆಯಲ್ಲಿ ಉಳಿದುಕೊಂಡು, ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದಳು. ದೀಪಾವಳಿ ರಜೆಗೆಂದು ಸ್ವಗ್ರಾಮಕ್ಕೆ ಹೋಗಿ, ನವೆಂಬರ್ 3ರಂದು ನಡೆಯುವ ಪರೀಕ್ಷೆಗೆ ಹಾಜರಾಗಲು ಮಂಗಳವಾರ ಮಧ್ಯಾಹ್ನವೇ ಸಂಬಂಧಿಕರ ಮನೆಗೆ ವಾಪಸ್ ಆಗಿದ್ದಳು. ಮನೆಯಲ್ಲಿ ಇರುವಂತೆ ತಿಳಿ ಹೇಳಿ ಬಾಲಕಿಯ ಅತ್ತೆ ಗ್ರಾಮದಲ್ಲಿನ ಮತ್ತೊಂದು ಮನೆಗೆ ಹೋಗಿದ್ದರು’ ಎಂದು ಅವರು ಹೇಳಿದ್ದಾರೆ.

‘ಬಾಲಕಿಯು ಬಯಲು ಬಹಿರ್ದೆಸೆಗೆ ಹೋಗುವುದಾಗಿ ಪಕ್ಕದ ಮನೆಯವರ ಹೇಳಿ ತೆರಳಿದ್ದಳು. ಸಂಜೆ ವೇಳೆ ಬಾಲಕಿ ಮನೆಯಲ್ಲಿ ಕಾಣದಿದ್ದಾಗ, ಆಕೆಯ ಅತ್ತೆ ಆತಂಕದಿಂದ ಪಕ್ಕದ ಮನೆಯವರನ್ನು ವಿಚಾರಿಸಿದರು. ಬಾಲಕಿಯನ್ನು ಹುಡುಕುತ್ತಾ ಹೊರಟಾಗ ಕಬ್ಬಿನ ಗದ್ದೆ ಸಮೀಪ ಚಪ್ಪಲಿ ಬಿದ್ದಿತ್ತು. ಸುಮಾರು 500 ಮೀಟರ್ ದೂರದಲ್ಲಿ ಇನ್ನೊಂದು ಚಪ್ಪಲಿ ಕಾಣಿಸಿತು. ಇದರಿಂದ ಆತಂಕಗೊಂಡು ಗ್ರಾಮಸ್ಥರು ತೀವ್ರ ಹುಡುಕಾಟ ನಡೆಸಿದಾಗ, ಸಂಜೆ ವೇಳೆಕಬ್ಬಿನ ಗದ್ದೆಯಲ್ಲಿ ಬಾಲಕಿ ಶವವಾಗಿ ಪತ್ತೆಯಾದಳು’ ಎಂದು ಅವರು ತಿಳಿಸಿದ್ದಾರೆ.

‘ಬಾಲಕಿಯನ್ನು ಕಬ್ಬಿನ ಗದ್ದೆಗೆ ಎಳೆದೊಯ್ದು ಅತ್ಯಾಚಾರ ಮಾಡಲಾಗಿದೆ. ದೇಹದ ಮೇಲೂ ತರಿಚಿದ ಗಾಯಗಳಾಗಿವೆ. ಕುತ್ತಿಗೆಗೆ ವೇಲ್ ಬಿಗಿಯಲಾಗಿದೆ’ ಎಂದು ಅವರು ತಿಳಿಸಿದ್ದಾರೆ.

‘ಬಾಲಕಿ ಮೇಲೆ ಅತ್ಯಾಚಾರ ಎಸಗಿ, ಬಳಿಕ ಕೊಲೆ ಮಾಡಿದ ಆರೋಪಿಗಳು ಪರಾರಿ ಆಗಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಮಾಡಲಾಗುತ್ತಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಇಶಾ ಪಂತ್ ‘ಪ್ರಜಾವಾಣಿ’ಗೆ ತಿಳಿಸಿದರು.

ಘಟನಾ ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಪ್ರಸನ್ನ ದೇಸಾಯಿ, ಡಿವೈಎಸ್ಪಿ ರವೀಂದ್ರ ಶಿರೂರ, ಸಿಪಿಐ ಬಾಸು ಚವ್ಹಾಣ, ಪಿಎಸ್‌ಐ ತಿರುಮಲೇಶ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಆಳಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT