ಕಲಬುರಗಿ: ಕಳೆದ ಒಂದು ತಿಂಗಳ ಕಾಲ ಲೋಕಸಭಾ ಚುನಾವಣೆಯ ಪ್ರಚಾರದ ಕಣದಲ್ಲಿ ಮುಳುಗಿ ಹೋಗಿದ್ದ ಅಭ್ಯರ್ಥಿಗಳು, ಶಾಸಕರು, ಸಚಿವರು ಹಾಗೂ ಮುಖಂಡರು ಮತದಾನದ ಮರುದಿನವಾದ ಬುಧವಾರ ವಿಶ್ರಾಂತಿ ಮೂಡ್ಗೆ ಜಾರಿದರು.
ಮತದಾನ ಪ್ರಕ್ರಿಯೆ ಪೂರ್ಣಗೊಂಡ ನಂತರ ಕಣದಲ್ಲಿರುವ ಅಭ್ಯರ್ಥಿಗಳು ಕೊಂಚ ನಿರಾಳರಾಗಿದ್ದಾರೆ. ಕುಟುಂಬ, ಆರೋಗ್ಯವನ್ನು ಬದಿಗಿಟ್ಟು ಹಗಲಿರುಳು ಎನ್ನದೇ ಕ್ಷೇತ್ರದಲ್ಲಿ ಸುತ್ತಾಡಿದ್ದರು. ಈಗ ಕುಟುಂಬಸ್ಥರೊಂದಿಗೆ ಕಾಲ ಕಳೆದು ಪಕ್ಷದ ಮುಖಂಡರು, ಕಾರ್ಯಕರ್ತರೊಂದಿಗೆ ಸೋಲು–ಗೆಲುವಿನ ಲೆಕ್ಕಾಚಾರದ ಮಾತುಕತೆಯಲ್ಲಿ ಸಕ್ರಿಯವಾಗಿಸಿಕೊಂಡರು.
ಬಿದ್ದಾಪುರ ಕಾಲೊನಿಯಲ್ಲಿರುವ ಡಾ. ಉಮೇಶ ಜಾಧವ ನಿವಾಸದಲ್ಲಿ ಸೋಲು–ಗೆಲುವಿನ ಲೆಕ್ಕಾಚಾರಗಳು ಜೋರಾಗಿದ್ದವು. ಎಂದಿನಂತೆ ಬೆಳಿಗ್ಗೆ 6ಕ್ಕೆ ಎದ್ದ ಜಾಧವ ಅವರು, ನಿತ್ಯದ ಕಾರ್ಯಗಳನ್ನು ಮುಗಿಸಿ ದಿನಪತ್ರಿಕೆಗಳನ್ನು ಓದಿದರು. ಉಪಾಹಾರದ ಬಳಿಕ ಮನೆಗೆ ಬಂದ ಪಕ್ಷದ ಮುಖಂಡರು, ಕಾರ್ಯಕರ್ತರು, ಬೆಂಬಲಿಗರೊಂದಿಗೆ ಮಾತುಕತೆ ನಡೆಸಿದರು. ನಾನಾ ಸಮಾಜದ ಮುಖಂಡರೂ ಬಂದು, ಚುನಾವಣೆಯ ವಿಚಾರಗಳನ್ನು ಪ್ರಸ್ತಾಪಿಸಿದರು. ಮಧ್ಯಾಹ್ನ ಮಾಧ್ಯಮದವರು ಜತೆಗೂ ಕೆಲಹೊತ್ತು ಮಾತನಾಡಿದರು.
ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ ಅವರು ಬೆಳಿಗ್ಗೆ 8.30ರಿಂದಲೇ ಮನೆಗೆ ಬಂದ ಆಪ್ತ ಮುಖಂಡರನ್ನು ಭೇಟಿಯಾದರು. ಚುನಾವಣೆಯ ಪ್ರಚಾರದ ನಡುವೆ ಹೆಚ್ಚಿನ ಸಮಯ ಮಾತನಾಡಲು ಆಗಲಿಲ್ಲ ಎಂದರು. ತಮ್ಮ ಹಿತೈಷಿಗಳು, ಕಾರ್ಯಕರ್ತರೊಂದಿಗೆ ಮತದಾನದ ಬಗ್ಗೆಯೂ ಚರ್ಚಿಸಿದರು ಎಂದು ಅವರ ಆಪ್ತರು ತಿಳಿಸಿದ್ದಾರೆ.
ಅಭ್ಯರ್ಥಿಗಳೊಂದಿ ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದ ಕಾಂಗ್ರೆಸ್ ಹಾಗೂ ಬಿಜೆಪಿ ಶಾಸಕರು, ಸಚಿವರು, ಮುಖಂಡರು ಸಹ ತಮ್ಮ ಕುಟುಂಬದ ಸದಸ್ಯರೊಂದಿಗೆ ಕಾಲ ಕಳೆದರು. ಕಾರ್ಯಕರ್ತರು ತಮ್ಮ ತಮ್ಮಲ್ಲಿಯೇ ಮತದಾನದ ವಿವರಗಳನ್ನು ವಿನಿಮಯ ಮಾಡಿಕೊಂಡರು.
‘ಅಭೂತಪೂರ್ವ ಜನಸ್ಪಂದನೆ ಮತ್ತು ಬೆಂಬಲದೊಂದಿಗೆ ಲೋಕಸಭಾ ಚುನಾವಣೆ ಸಂಪನ್ನವಾಗಿದೆ. ಚುನಾವಣೆ ಹಿನ್ನೆಲೆಯಲ್ಲಿ ಸಚಿವ ಡಾ. ಶರಣಪ್ರಕಾಶ ಪಾಟೀಲ ಅವರ ಮನೆಯಲ್ಲಿ ಸಚಿವ ಪ್ರಿಯಾಂಕ್ ಖರ್ಗೆ, ಶಾಸಕ ಬಿ.ಆರ್.ಪಾಟೀಲ, ಮುಖಂಡರಾದ ಶಿವಾನಂದ ಪಾಟೀಲ ಮರತೂರ, ಕಿರಣ್ ದೇಶಮುಖ, ಪ್ರವೀಣ್ ಪಾಟೀಲ ಹರವಾಳ ಅವರ ಜೊತೆ ಸೌಹಾರ್ದಯುತ ಭೇಟಿ ಮಾಡಿದೆ. ಕಾಂಗ್ರೆಸ್ ಪಕ್ಷದ ಚುನಾವಣೋತ್ತರ ಕಾರ್ಯಗಳ ಕುರಿತು ಚರ್ಚಿಸಲಾಯಿತು’ ಎಂದು ಕೆಪಿಸಿಸಿ ಸದಸ್ಯ ಅರುಣುಕುಮಾರ ಎಂ.ಪಾಟೀಲ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.