ಅಫಜಲಪುರ: ಎತ್ತಿನಗಾಡಿ–ಬೈಕ್ ಮಧ್ಯೆ ಶುಕ್ರವಾರ ರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಅಫಜಲಪುರ ತಾಲ್ಲೂಕಿನ ಬಂಕಲಗಾ ಗ್ರಾಮದ ಪುಂಡಲೀಕ ಶರಣಪ್ಪ (28) ಎಂಬುವವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕಲಬುರ್ಗಿಯಿಂದ ಅಫಜಲಪುರದತ್ತ ತೆರಳುವ ವೇಳೆ ಹಿಂದಿನಿಂದ ರಭಸದಿಂದ ಡಿಕ್ಕಿ ಹೊಡೆದಿದ್ದರಿಂದ ಸ್ಥಳದಲ್ಲೇ ಮೃತಪಟ್ಟರು.
ಬೈಕ್ ಸವಾರಿ ಮಾಡುವ ವೇಳೆ ಹೆಲ್ಮೆಟ್ ಹಾಕಿದ್ದರು. ಆದರೆ, ಡಿಕ್ಕಿ ಹೊಡೆದ ರಭಸಕ್ಕೆ ಹೆಲ್ಮೆಟ್ ರಸ್ತೆ ಮೇಲೆ ಬಿದ್ದಿದೆ. ಹೀಗಾಗಿ, ರಸ್ತೆಗೆ ತಲೆ ಜೋರಾಗಿ ಬಡಿದಿದ್ದರಿಂದ ತೀವ್ರ ರಕ್ತಸ್ರಾವವಾಗಿ ಸಾವಿಗೀಡಾಗಿದರು ಎಂದು ಪ್ರಕರಣ ದಾಖಲಿಸಿಕೊಂಡ ಅಫಜಲಪುರ ಠಾಣೆ ಪೊಲೀಸರು ತಿಳಿಸಿದ್ದಾರೆ.