ಸೇಡಂ(ಕಲಬುರಗಿ ಜಿಲ್ಲೆ): ಸರ್ಕಾರಿ ಶಾಲಾ ಆವರಣದಲ್ಲಿ ನಿಂತ ಮಳೆ ನೀರಲ್ಲಿ ಕುಳಿತು ಪ್ರತಿಭಟನೆ ನಡೆಸುತ್ತಿರುವ ಎಸ್ಡಿಎಂಸಿ ಅಧ್ಯಕ್ಷ ಜಗನ್ನಾಥ ಬಿಜನಳ್ಳಿ ಅವರು, 'ಆವರಣದಲ್ಲಿ ನಿಂತ ಮಳೆ ನೀರು ಖಾಲಿ ಮಾಡಿ, ನೀರು ನಿಲ್ಲದಂತೆ ಆವರಣವನ್ನು ದುರಸ್ತಿ ಮಾಡುವಂತೆ' ಮಂಗಳವಾರ ಒತ್ತಾಯಿಸಿದರು.
ಸೇಡಂನ ವಿದ್ಯಾನಗರ ಬಡಾವಣೆಯಲ್ಲಿ ಇರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ.2 ಆವರಣದಲ್ಲಿ ಪ್ರತಿಭಟನೆ ನಡೆಸಿದರು.
'ನಾನು ಎಸ್ಡಿಎಂಸಿ ಅಧ್ಯಕ್ಷನಾಗಿ ಒಂದೂವರೆ ವರ್ಷವಾಗಿದೆ. ಅಧ್ಯಕ್ಷ ಆದಾಗಿನಿಂದಲೂ ಶಾಲೆಗೆ ಮೂಲಸೌಕರ್ಯ ಒದಗಿಸುವಂತೆ ಮನವಿ ಪತ್ರ ಕೊಡುತ್ತಾ ಬಂದಿದ್ದೇನೆ. ಮುಖ್ಯವಾಗಿ ಶಾಲೆಯ ಆವರಣದಲ್ಲಿ ಮಳೆ ನೀರು ನಿಂತು ಬಹುದೊಡ್ಡ ಸಮಸ್ಯೆ ಆಗುತ್ತಿದೆ. ಮೈದಾನವನ್ನು ದುರಸ್ತಿಗೊಳಿಸಿ, ಮಳೆ ನೀರು ಸರಾಗವಾಗಿ ಹರಿದು ಹೋಗುವ ವ್ಯವಸ್ಥೆ ಮಾಡಿಕೊಡಬೇಕು ಎಂದು ಮನವಿ ಸಲ್ಲಿಸಿದ್ದೇನೆ. ಆದರೆ, ಸಂಬಂದಪಟ್ಟ ಅಧಿಕಾರಿಗಳು ಇಲ್ಲಿಯವರೆಗೆ ಸಮಸ್ಯೆ ಇತ್ಯರ್ಥಪಡಿಸಿಲ್ಲ. ಹೀಗಾಗಿ, ನೀರಲ್ಲಿಯೇ ಕುಳಿತು ಪ್ರತಿಭಟನೆ ಆರಂಭಿಸಿದ್ದೇನೆ. ಸಮಸ್ಯೆ ಇತ್ಯರ್ಥದ ಭರವಸೆ ಕೊಡುವರೆಗೂ ಪ್ರತಿಭಟನೆ ಕೈ ಬಿಡುವುದಿಲ್ಲ' ಎಂದು ಪ್ರತಿಭಟನಾ ನಿರತ ಜಗನ್ನಾಥ ಬಿಜನಳ್ಳಿ ಹೇಳಿದರು.
ಎಸ್ಡಿಎಂಸಿ ಅಧ್ಯಕ್ಷರ ಜೊತೆಗೆ ಶಾಲೆಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳ ಪಾಲಕರು ಪ್ರತಿಭಟನೆಗೆ ಬೆಂಬಲ ನೀಡಿದ್ದಾರೆ.
ಈ ಸಂದರ್ಭದಲ್ಲಿ ಮನೋಹರ ವಿಶ್ವಕರ್ಮ, ನರಸಪ್ಪ ಭಂಡಾರಿ, ಭೀಮರಾವ ಕಟ್ಟಿಮನಿ, ಖಾಸಿಂ ಅಲಿ, ವೆಂಕಟೇಶ ಎಂ.ಜಿ, ನಿಜಾಮೋದ್ದಿನ್ , ಕಸ್ತೂರಬಾಯಿ, ಸ್ವಾತಿ, ಅಕ್ಷತಾ, ಅಂಕಿತಾ ಇದ್ದರು.