ಕಲಬುರ್ಗಿ: ಜೈಲಿನಲ್ಲಿ ಸಾವಿಗೀಡಾದ ಮೂರು ವರ್ಷದ ಮಗುವಿಗೆ ಕಾರಣರಾದ ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಜಿಮ್ಸ್ ಆಸ್ಪತ್ರೆ ಎದುರು ಮಧ್ಯಾಹ್ನದಿಂದ ಪ್ರತಿಭಟನೆ ನಡೆಸುತ್ತಿರುವ ಜೈನಾಪುರ ಗ್ರಾಮಸ್ಥರು ಹಾಗೂ ಕೋಲಿ ಸಮಾಜದ ಪ್ರಮುಖರು ಆಸ್ಪತ್ರೆ ಎದುರಿನ ಸೇಡಂ ರಸ್ತೆಯನ್ನು ಬಂದ್ ಮಾಡಿದ್ದಾರೆ.
ಇಲ್ಲಿಯವರೆಗೆ ರಸ್ತೆಯ ಒಂದು ಬದಿಯನ್ನು ಮಾತ್ರ ಬಂದ್ ಮಾಡಿದ್ದರು. ಇದೀಗ ಎರಡೂ ರಸ್ತೆಗಳನ್ನು ಬಂದ್ ಮಾಡಿದರು. ಇದರಿಂದ ಗಲಿಬಿಲಿಗೊಂಡ ಪೊಲೀಸರು ಮಾರ್ಗ ಬದಲಾವಣೆ ಮಾಡಿದರು.
ಜೇವರ್ಗಿ ಠಾಣೆ ಪೊಲೀಸರು ಬಿಜೆಪಿ ಮಾಜಿ ಶಾಸಕರೊಬ್ಬರು ಹೇಳಿದಂತೆ ಕೇಳುತ್ತಿದ್ದು, ಜೈನಾಪುರದ ಸಂಗೀತಾ ತಳವಾರ ಆಕೆಯ ಪತಿ ಸಂತೋಷ ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದರು. ಪೊಲೀಸರು ಸಂಗೀತಾ ಅವರನ್ನು ಥಳಿಸುವುದನ್ನು ನೋಡಿದ ಮಗು ಭಾರತಿ ಅಸ್ವಸ್ಥಗೊಂಡಿತ್ತು.
ಸಂಗೀತಾರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದಾಗ ಮಗುವನ್ನೂ ಜೈಲಿಗೆ ಕರೆದೊಯ್ದಿದ್ದರು. ಅಲ್ಲಿ ಮಗು ಸಾವನ್ನಪ್ಪಿತ್ತು ಎನ್ನಲಾಗಿದೆ.