ಚಿಂಚೋಳಿ (ಕಲಬುರಗಿ ಜಿಲ್ಲೆ): ಮಳೆಯಿಂದ ಉಂಟಾಗಿರುವ ಬೆಳೆಹಾನಿಗೆ ಸರ್ಕಾರ ಪ್ರಕೃತಿ ವಿಕೋಪ ಪರಿಹಾರ ನಿಧಿಯಿಂದ ನೀಡುತ್ತಿರುವ ಪರಿಹಾರದ ವಿವರವನ್ನು ಗ್ರಾ.ಪಂಗಳಲ್ಲಿ ಪ್ರಕಟಿಸಬೇಕು ಎಂದು ಕೆಪಿಸಿಸಿ ರಾಜ್ಯ ಉಪಾಧ್ಯಕ್ಷ ಡಾ. ಶರಣಪ್ರಕಾಶ ಪಾಟೀಲ ಒತ್ತಾಯಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಯಾರ ಜಮೀನಿನಲ್ಲಿ ಎಷ್ಟು ಬೆಳೆ ಹಾನಿಯಾಗಿದೆ. ಯಾರಿಗೆ ಎಷ್ಟು ಪರಿಹಾರ ಅವರ ಖಾತೆಗೆ ಜಮಾ ಆಗಿದೆ ಎಂಬುದು ಜನತೆಗೆ ತಿಳಿಯಬೇಕು. ಹೀಗಾಗಿ ಪ್ರತಿ ಪಂಚಾಯಿತಿಯಲ್ಲಿ ಪರಿಹಾರದ ವಿವರ ಪ್ರಕಟಿಸುವುದು ಅತ್ಯಂತ ಅಗತ್ಯವಾಗಿದೆ’ ಎಂದರು.
‘ಸರ್ಕಾರ ಬೆಳೆ ಹಾನಿಯ ವೈಜ್ಞಾನಿಕ ಸಮೀಕ್ಷೆ ನಡೆಸಿಲ್ಲ. ಹೆಚ್ಚು ಬೆಳೆಯಾನಿಯಾದರೂ ಕಡಿಮೆ ಪ್ರಮಾಣದ ಪರಿಹಾರ ಖಾತೆಗೆ ಜಮಾ ಮಾಡಲಾಗಿದೆ. ಈ ಕುರಿತು ರೈತರು ದೂರುತ್ತಿದ್ದಾರೆ ಎಂದರು. ಈಗಲೂ ಕಾಲ ಮಿಂಚಿಲ್ಲ. ನಿಖರ ಸರ್ವೆ ನಡೆಸಿ ಹಾನಿಗೆ ತಕ್ಕಷ್ಟು ಪರಿಹಾರ ನೀಡಬೇಕು’ ಎಂದು ಒತ್ತಾಯಿಸಿದರು.