‘ಸತ್ವ ಕಳೆದುಕೊಳ್ಳುತ್ತಿದೆ ಮಣ್ಣು’
‘ಇತ್ತೀಚೆಗೆ ವರ್ಷದಿಂದ ವರ್ಷಕ್ಕೆ ಮಣ್ಣಿನ ಸತ್ವ ಕಡಿಮೆಯಾಗುತ್ತಲೇ ಇದೆ. ಭಾರತ ಸರ್ಕಾರವೇ ಸಂಸತ್ತಿನಲ್ಲಿ ಹೇಳಿರುವಂತೆ 1980ರಲ್ಲಿ 1 ಕೆ.ಜಿ ರಾಸಾಯನಿಕ ಪೋಷಾಕಾಂಶ ಭೂಮಿಗೆ ಹಾಕಿದರೆ 14 ಕೆ.ಜಿಗಳಷ್ಟು ಆಹಾರ ಧಾನ್ಯ ಉತ್ಪಾದನೆಯಾಗುತ್ತಿತ್ತು. ಇದೀಗ 1 ಕೆ.ಜಿ ಪೋಷಕಾಂಶ ಹಾಕಿದರೆ ಬರೀ ನಾಲ್ಕು ಕೆ.ಜಿಗಳಷ್ಟುಆಹಾರ ಧಾನ್ಯ ಸಿಗುತ್ತಿದೆ. 40 ವರ್ಷಗಳಲ್ಲಿ ಮಣ್ಣಿನ ಶಕ್ತಿ ಕಳೆದುಕೊಂಡಿದೆ’ ಎಂದು ವಿಶ್ರಾಂತ ಕುಲಪತಿ ವಿಠ್ಠಲ ಐ. ಬೆಣಗಿ ಕಳವಳ ವ್ಯಕ್ತಪಡಿಸಿದರು. ‘ಕಬ್ಬಿನ ಹೆಚ್ಚಿನ ಇಳುವರಿ ಪಡೆಯಲು ಮಣ್ಣಿನ ಸತ್ವ ಹೆಚ್ಚಿಸುವುದೂ ಮುಖ್ಯ. ಕಬ್ಬು ಚೆನ್ನಾಗಿ ಬೆಳೆಯಲು ಮಣ್ಣಿನಲ್ಲಿರುವ ಸಾವಯವ ಇಂಗಾಲ ಕನಿಷ್ಠ ಶೇ 0.75 ರಷ್ಟಿರಬೇಕು. ಇಡೀ ರಾಜ್ಯದಲ್ಲಿ ಮಣ್ಣಿನಲ್ಲಿರುವ ಸಾವಯವ ಇಂಗಾಲವು ಶೇ 0.25 ರಿಂದ ಶೇ 0.30ರಷ್ಟಿದೆ. ಮಣ್ಣಿನಲ್ಲಿ ಜೀವಾಣುಗಳೇ ಇಲ್ಲದಿದ್ದರೆ ಯಾವುದೇ ಬೆಳೆಯೂ ಚೆನ್ನಾಗಿ ಬೆಳೆಯಲು ಸಾಧ್ಯವೇ ಇಲ್ಲ’ ಎಂದು ಪ್ರತಿಪಾದಿಸಿದರು.