ಕಲಬುರ್ಗಿ: ಮರಾಠಾ ಅಭಿವೃದ್ಧಿ ನಿಗಮ ಕೈಬಿಡುವಂತೆ ಆಗ್ರಹಿಸಿ ಶನಿವಾರ ಕರೆ ನೀಡಿದ ರಾಜ್ಯ ಬಂದ್ ಕಲಬುರ್ಗಿಯಲ್ಲಿ ಯಾವುದೇ ರೀತಿಯ ಪರಿಣಾಮ ಬೀರಲಿಲ್ಲ.
ವಾಹನ ಸಂಚಾರ, ವ್ಯಾಪಾರ ವಹಿವಾಟು, ಹೋಟೆಲ್, ಪೆಟ್ರೋಲ್ ಬಂಕ್ ಸೇರಿದಂತೆ ಎಲ್ಲ ಚಟುವಟಿಕೆಗಳೂ ನಿರಾಳವಾಗಿ ಆರಂಭವಾದವು. ತರಕಾರಿ, ಹಣ್ಣು ಹಾಗೂ ದಿನಸಿ ವ್ಯಾಪಾರಕ್ಕೆ ಹೆಸರಾದ ಇಲ್ಲಿನ ಸೂಪರ್ ಮಾರುಕಟ್ಟೆಯಲ್ಲಿ ಕೂಡ ಜನಜಂಗುಳಿ ಎಂದಿನಂತಿದೆ.
ಸರ್ಕಾರಿ ಹಾಗೂ ಖಾಸಗಿ ಬಸ್ ಸಂಚಾರ, ಆಟೊ, ಕಾರ್, ಬೈಕುಗಳ ಓಡಾಟ ಎಂದಿನಂತಿದೆ.
ಕನ್ನಡ ಸಂಘಟನೆ-ಕರ್ನಾಟಕ ನೇತೃತ್ವದಲ್ಲಿ ಹೋರಾಟಕ್ಕೆ 14ಕ್ಕೂ ಹೆಚ್ಚು ಕನ್ನಡಪರ ಸಂಘಟನೆಗಳು ಬೆಂಬಲ ಘೋಷಿಸಿವೆ. ಆದರೆ ಬೆಳಿಗ್ಗೆ 9.30ರವರೆಗೂ ಯಾವುದೇ ಸಂಘಟನೆಯ ಒಬ್ಬ ಕಾರ್ಯಕರ್ತ ಕೂಡ ಕಂಡುಬರಲಿಲ್ಲ. ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತಿಯಲ್ಲಿ ಬೆಳಿಗ್ಗೆ 11ರ ಸುಮಾರಿಗೆ ಮುಖ್ಯಮಂತ್ರಿಗಳ ಪ್ರತಿಕೃತಿ ದಮನ ಮಾಡುವುದಾಗಿ ಹೋರಾಟದ ನೇತೃತ್ವ ವಹಿಸಿದ ಮುಖಂಡರು ಹೇಳಿದ್ದಾರೆ.