ಅವಿನಾಶ ಬೋರಂಚಿ
ಸೇಡಂ: ಸಸ್ಯ ಸಂಪತ್ತು ಬೆಳಸುವ ಉದ್ದೇಶದಿಂದ 2023-2024ನೇ ಸಾಲಿನಲ್ಲಿ ಸೇಡಂ ಸಾಮಾಜಿಕ ಅರಣ್ಯ ವಲಯದ ಅಧಿಕಾರಿಗಳು ತಾಲ್ಲೂಕಿನ ವಿವಿಧೆಡೆ ಸುಮಾರು 58 ಸಾವಿರಕ್ಕೂ ಅಧಿಕ ಸಸಿಗಳನ್ನು ನೆಡಲು ಗುರಿ ಹಾಕಿಕೊಂಡಿದ್ದಾರೆ.
ತಾಲ್ಲೂಕಿನ ಗುಂಡೆಪಲ್ಲಿ (ಕೆ) ಮತ್ತು ದುಗನೂರು ಗ್ರಾಮದ ಅರಣ್ಯ ಕ್ಷೇತ್ರದಲ್ಲಿ ಸಸಿಗಳನ್ನು ನಿತ್ಯ ನೀರು, ಮಣ್ಣು ಹಾಕಿ ಬೆಳೆಸಿದ್ದಾರೆ. 6 ತಿಂಗಳಿಂದ ಒಳಗೊಂಡು ವರ್ಷದವರೆಗೆ ಬೆಳೆಸಿದ ಸಸಿಗಳಿವೆ. ಎರಡು ಅರಣ್ಯ ಕ್ಷೇತ್ರ ಒಳಗೊಂಡು ಸುಮಾರು 60 ಸಾವಿರ ಸಸಿಗಳಿದ್ದು, 58 ಸಾವಿರಕ್ಕೂ ಅಧಿಕ ಸಸಿಗಳನ್ನು ರಸ್ತೆ ಬದಿಗಳಲ್ಲಿ, ಸರ್ಕಾರಿ ಗೈರಾಣಿ ಜಮೀನು, ಶಾಲಾ-ಕಾಲೇಜು ಸ್ಥಳ, ಸ್ಮಶಾನ ಭೂಮಿ ಸೇರಿದಂತೆ ಇನ್ನಿತರ ಕಡೆಗಳಲ್ಲಿ ನೆಡುವ ಉದ್ದೇಶವನ್ನು ಹಾಕಿಕೊಳ್ಳಲಾಗಿದೆ’ ಎಂದು ಇಲಾಖೆಯ ಉಪವಲಯ ಅರಣ್ಯಾಧಿಕಾರಿ ಮೋನಪ್ಪ ನಾಯಕೋಡಿ ‘ಪ್ರಜಾವಾಣಿ’ಗೆ ತಿಳಿಸಿದರು.
‘ಅರಳಿ 3,00, ಆಲ 1,000, ಅತ್ತಿ 1,000, ತಪಸಿ 3,500, ಶಿಶು 3,000, ಮಾವು 500, ಮಳೆಮರ 600, ಭಾಗ್ಯ 2,000, ಬೊರಗಾ 800, ಗುಲ್ ಮೋಹರ್ 800, ಬುಗರಿ 1,000, ಫೆಲೋ ಫಾಮ್ 2,500, ಹೊಂಗೆ 1500, ಬಿಳಿಭಾಗ್ಯ 4000, ಬೇವು 800 ಹೀಗೆ ವಿವಿಧ ಜಾತಿ, ಥಳಿಯ ಸಸಿಗಳು ನಮ್ಮಲ್ಲಿವೆ ಎಂದು ಅವರು ಮಾಹಿತಿ ನೀಡಿದರು.
ಕಳೆದ ವರ್ಷ ಸುಮಾರು 80 ಸಾವಿರಕ್ಕೂ ಅಧಿಕ ಗಿಡಗಳನ್ನು ನೆಡಲಾಗಿತ್ತು, ಅದರಲ್ಲಿ ಶೇ 80 ರಷ್ಟು ಸಸಿಗಳು ಬೆಳೆದಿವೆ. ಕೆಲವು ಕಡೆಗಳಲ್ಲಿ ಸಸ್ಯ ನಾಶವಾಗಿದೆ. ಮದನಾ, ಮುಧೋಳ ಭಾಗದಲ್ಲಿ ಸಸಿಗಳು ಈಗ ದೊಡ್ಡದಾಗಿ ಗಿಡವಾಗಿವೆ. ಗಿಡ ನೆಡಬಯಸುವವ ಪರಿಸರ ಪ್ರೇಮಿಗಳಿಗೂ, ರೈತರಿಗೂ ಸಹ ಸಸಿಗಳನ್ನು ನೀಡಲಾಗುತ್ತಿದ್ದು, ಮಹಾಗಾನಿ ₹23 ಮತ್ತು ಸಾಗುವಾನಿ ₹6 ಇದೆ. ರೈತರು ಪಹಣಿ, ಆಧಾರ್ ಕಾರ್ಡ್ ಸೇರಿದಂತೆ ವಿವರ ನೀಡಿ ಸಸಿಗಳನ್ನು ಪಡೆದು ಪೋಷಿಸಬಹುದಾಗಿದೆ’ ಅಧಿಕಾರಿಗಳು ತಿಳಿಸಿದ್ದಾರೆ. 9980855495, 8861066897 ಸಂಪರ್ಕಿಸಬಹುದಾಗಿದೆ.
ನಾವು ಸಸಿಗಳನ್ನು ಪೋಷಿಸಿ ಮುಂಗಾರು ಸಮಯದಲ್ಲಿ ನೆಟ್ಟು ಬೆಳವಣಿಗೆಯತ್ತ ಜಾಗೃತಿ ವಹಿಸುತ್ತೇವೆ. ಬೇಸಿಗೆಯಲ್ಲಿ ಸಾರ್ವಜನಿಕರು ಹೊಲಗಲ್ಲಿ ಬೆಂಕಿ ಹಚ್ಚುವುದನ್ನು ಮಾಡದೇ ಇದ್ದಲ್ಲಿ ಸಸ್ಯ ಪುನಃ ಚೇತರಿಕೆ ಪಡೆದು ಬೆಳೆಯುತ್ತದೆ.
-ಲಕ್ಷ್ಮಣ ಎಮ್. ವಲಯ ಅರಣ್ಯಾಧಿಕಾರಿ ಸೇಡಂ
ನಾನು ಸಸಿಗಳನ್ನು ಮಾನವನಂತೆ ಪೋಷಿಸಿ ಸೇಡಂ ಪಟ್ಟಣ ಸೇರಿದಂತೆ ಅನೇಕ ಕಡೆಗಳಲ್ಲಿ ನೆಟ್ಟಿದ್ದೇನೆ. ಸಾರ್ವಜನಿಕರು ಸಸ್ಯ ಸಂಪತ್ತನ್ನು ಜಾಗೃಕತೆಯಿಂದ ಕಾಪಾಡಬೇಕು.
-ಶ್ರೀನಿವಾಸ ಕಾಸೋಜು ಪರಿಸರ ಪ್ರೇಮಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.