ಚಿಂಚೋಳಿ (ಕಲಬುರಗಿ): ತಾಲ್ಲೂಕಿನ ಕುಸ್ರಂಪಳ್ಳಿ ಸಮೀಪದ ಚೆಕ್ ಪೋಸ್ಟ್ನಲ್ಲಿ ಮಂಗಳವಾರ ದಾಖಲೆ ಇಲ್ಲದೆ ಸಾಗಿಸುತ್ತಿದ್ದ ₹ 2.29 ಲಕ್ಷ ಹಣ ವಶಕ್ಕೆ ಪಡೆಯಲಾಗಿದೆ.
'ಕರ್ನಾಟಕ ಮತ್ತು ತೆಲಂಗಾಣ ಮಧ್ಯೆ ಸಂಪರ್ಕಿಸುವ ರಾಜ್ಯ ಹೆದ್ದಾರಿ 122ರ ಕುಸ್ರಂಪಳ್ಳಿ ಬಳಿ ಚೆಕ್ ಪೋಸ್ಟ್ ಸ್ಥಾಪಿಸಲಾಗಿದೆ. ಚೆಕ್ ಪೋಸ್ಟ್ನಲ್ಲಿ ಬೈಕ್ ಸವಾರನನ್ನು ತಪಾಸಣೆ ನಡೆಸಿದಾಗ ಸೂಕ್ತ ದಾಖಲೆ ಇಲ್ಲದ ₹ 2.29 ಲಕ್ಷ ಪತ್ತೆಯಾಗಿದೆ' ಎಂದು ಸಹಾಯಕ ಚುನಾವಣಾಧಿಕಾರಿ ಸಂತೋಷ ಇನಾಂದಾರ್ ತಿಳಿಸಿದ್ದಾರೆ.
ಎಸ್ಎಸ್ಟಿ ತಂಡದ ಅಧಿಕಾರಿ ಪ್ರಭುಲಿಂಗ ವಾಲಿ ಮತ್ತು ಸಹಾಯಕ ಜಗನ್ನಾಥ ರಡ್ಡಿ ತುಮಕುಂಟಾ, ತಹಶೀಲ್ದಾರ್ ಕಚೇರಿಯ ಚುನಾವಣಾ ಶಾಖೆಯ ಸಹಾಯಕ ಶೋಯೇಬ್ ಅವರಯ ಸ್ಥಳಕ್ಕೆ ಭೇಟಿ ನೀಡಿ, ಪಂಚನಾಮೆ ನಡೆಸಿ ಹಣ ಜಪ್ತಿ ಮಾಡಿಕೊಂಡು ಖಜಾನೆಗೆ ತಂದು ಒಪ್ಪಿಸಿದ್ದಾರೆ.
ಉಡುಮನಳ್ಳಿಯ ವಿಶಾಲ ಎಂಬುವವರು ಬೈಕ್ನಲ್ಲಿ ಚಿಂಚೋಳಿ ಕಡೆಗೆ ಹೊರಟಿದ್ದರು. ಚೆಕ್ ಪೋಸ್ಟ್ ಸಿಬ್ಬಂದಿ ತಪಾಸಣೆ ನಡೆಸಿದಾಗ ಹಣ ಪತ್ತೆಯಾಗಿದೆ. ಹಣ ಎಲ್ಲಿಂದ ತಂದಿದ್ದು, ಎಲ್ಲಿಗೆ ತೆಗೆದುಕೊಂಡು ಹೋಗುತ್ತಿರುವ ಬಗ್ಗೆ ಸ್ಪಷ್ಟವಾಗಿ ಹೇಳಲಿಲ್ಲ. ಹಣಕ್ಕೆ ಸಂಬಂಧಿಸಿದ ದಾಖಲೆಗಳು ಇರಲಿಲ್ಲ ಎಂದು ಪ್ರಭುಲಿಂಗ ವಾಲಿ ಹೇಳಿದರು.
ಚೆಕ್ ಪೋಸ್ಟ್ ಸಿಬ್ಬಂದಿ ಜಾವೀದ್ ಪಟೇಲ್, ಸಹಾಯಕ ವೀರೇಂದ್ರ ಜಾಬಶೆಟ್ಟಿ, ಪೊಲೀಸ್ ಕಾನ್ಸ್ಟೆಬಲ್ ಹಂಸಪಾಲರೆಡ್ಡಿ, ಗೃಹ ರಕ್ಷಕರು ಇದ್ದರು.