ಕಲಬುರ್ಗಿ: ‘ಜನರ ಹಿತಾಸಕ್ತಿ ಬದಿಗಿಟ್ಟು ತಮ್ಮ ಸ್ವಾರ್ಥಕ್ಕಾಗಿ ಬಣಗಳನ್ನು ಸೃಷ್ಟಿಸಿಕೊಂಡು ರಾಜೀನಾಮೆ ಕೊಡುವ ಶಾಸಕರನ್ನು ಮುಲಾಜಿಲ್ಲದೇ ಚುನಾವಣೆಯಲ್ಲಿ ಸೋಲಿಸಿ’ ಎಂದು ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ವಿ.ಗೋಪಾಲಗೌಡ ತಿಳಿಸಿದರು.
ಕರ್ನಾಟಕ ಪ್ರಾಂತ ರೈತ ಸಂಘವು ಭಾನುವಾರ ಹಮ್ಮಿಕೊಂಡಿದ್ದ ಭೂ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
‘ನಿಮ್ಮ ಮತವನ್ನು ಹಣ, ಹೆಂಡ, ಕಿವಿಯೋಲೆ ಕೊಡುವವರಿಗೆ ಮಾರಿಕೊಳ್ಳಬೇಡಿ. ಹಾಗೆ ಮಾರಿಕೊಂಡರೆ, ನಿಮಗೆ ಪ್ರಶ್ನಿಸುವ ಹಕ್ಕೂ ಇಲ್ಲದಂತಾಗುತ್ತದೆ. ನಿಮ್ಮ ಪರವಾಗಿ ವಿಧಾನಸಭೆಯಲ್ಲಿ ಕೆಲಸ ಮಾಡುವವರನ್ನು ಆರಿಸಿ ಕಳುಹಿಸಿ’ ಎಂದು ಅವರು ತಿಳಿಸಿದರು.
‘ಇಂದಿನ ಜನಪ್ರತಿನಿಧಿಗಳು ಚುನಾವಣೆಯಲ್ಲಿ ಗೆದ್ದ ಬಳಿಕ ಜನರ ಹಿತಾಸಕ್ತಿಯನ್ನೇ ಮರೆಯುತ್ತಾರೆ. ಅವರನ್ನು ಚುನಾವಣೆಯಲ್ಲಿ ಗೆಲ್ಲಿಸಬೇಡಿ. ಶಾಶ್ವತವಾಗಿ ಮನೆಯಲ್ಲೇ ಕೂರಿಸಿ’ ಎಂದು ಸಲಹೆ ನೀಡಿದರು.