ವಾಡಿ: 'ದೇಶದ ಹಲವಾರ ಸಮಸ್ಯೆಗಳಲ್ಲಿ ಅಪೌಷ್ಟಿಕತೆ ಸಮಸ್ಯೆ ಸಹ ಒಂದಾಗಿದ್ದು, ಅದರಲ್ಲಿ ಮಕ್ಕಳು, ಬಾಣಂತಿ, ಗರ್ಭಿಣಿಯರು ಹಾಗೂ ವಯೋವೃದ್ಧರ ಆರೋಗ್ಯಕ್ಕೆ ಸವಾಲು ಎಸೆಯುತ್ತಿದೆ. ಇದರ ತಡೆಗೆ ಪೌಷ್ಟಿಕ ಆಹಾರ ಸೇವನೆಯೊಂದೇ ಮದ್ದು' ಎಂದು ಎಸಿಸಿ ಕ್ಲಸ್ಟರ್ ಹೆಡ್ ಮುಖ್ಯಸ್ಥ ನಾಗೇಶ್ವರರಾವ್ ತೆನ್ನತಿ ಅಭಿಪ್ರಾಯ ಪಟ್ಟರು.
ಎಸಿಸಿ ಕಂಪನಿ ವತಿಯಿಂದ ಕಂಪನಿ ವ್ಯಾಪ್ತಿಯ 60 ಅಂಗನವಾಡಿ ಮಕ್ಕಳಿಗೆ ಪೌಷ್ಟಿಕಾಂಶವುಳ್ಳ ಸ್ಪಿರುಲಿನಾ ಚಿಕ್ಕಿ ವಿತರಿಸಿ ಅವರು ಮಾತನಾಡಿದರು.
ಎಸಿಸಿಯ ಸಮಗ್ರ ಕ್ಷೇತ್ರ ಯೋಜನೆ ಅಡಿಯಲ್ಲಿ ವಾಡಿ ಪಟ್ಟಣ, ರಾವೂರು, ಇಂಗಳಗಿ, ಲಕ್ಷ್ಮೀಪುರವಾಡಿ, ಕಂದನೂರು ಗ್ರಾಮಗಳ ಅಪೌಷ್ಟಿಕತೆಯಿಂದ ಬಳಲುತ್ತಿರುವ ಒಟ್ಟು 661 ಮಕ್ಕಳಿಗೆ ಪದಾರ್ಥ ವಿತರಿಸಲಾಗುತ್ತಿದೆ. 2025ರೊಳಗೆ ಕಂಪನಿ ವ್ಯಾಪ್ತಿ ವಿವಿಧ ಹಳ್ಳಿಯ ಯಾವ ಮಕ್ಕಳಲ್ಲೂ ಪೌಷ್ಟಿಕಾಂಶ ಕೊರತೆ ಕಾಡದಿರಲು ಈ ಯೋಜನೆ ರೂಪಿಸಲಾಗಿದೆ ಎಂದರು.
ವಾಡಿ ವಲಯ ಅಂಗನವಾಡಿ ಮೇಲ್ವಿಚಾರಕಿ ನಾಗಮ್ಮ ಸಂಗಶೆಟ್ಟಿ ಮಾತನಾಡಿದರು.
ಸಿಎಸ್ಆರ್ ವಿಭಾಗದ ಮುಖ್ಯಸ್ಥ ಪೆದ್ದಣ್ಣ ಬಿದಾಳ, ಮಾನವ ಸಂಪನ್ಮೂಲ ವಿಭಾಗದ ಪ್ರಬಂಧಕ ಯತೀಸ್ ಗೌಡ, ಜಗದೀಶ ರಾಠೋಡ, ನಿವೃತ್ತ ತಹಶೀಲ್ದಾರ ಮಹಾದೇವಪ್ಪ, ಮೈರಾಡ್ ಸಂಸ್ಥೆಯ ಸಂಚಾಲಕ ಲಕ್ಷ್ಮಣರೆಡ್ಡಿ, ರಾವೂರು ವಲಯ ಅಂಗನವಾಡಿ ಮೇಲ್ವಿಚಾರಕಿ ಸುನೀತಾ, ಮಮತಾ ಸೇರಿದಂತೆ ಅಂಗನವಾಡಿ ಕಾರ್ಯಕರ್ತೆಯರು ಇದ್ದರು.