ಮಂಗಳವಾರ ಬೆಳಿಗ್ಗೆ ನಗರದಲ್ಲಿ ಸುತ್ತಾಡಿದ ಎಲ್ಲರಿಗೂ ಕಣ್ಣಿಗೆ ರಾಚಿದ್ದು ಈ ತ್ಯಾಜ್ಯದ ಗುಡ್ಡೆಗಳು. ಇಲ್ಲಿನ ಶರಣಬಸವೇಶ್ವರ ಕೆರೆ ಆವರಣ, ಸೂಪರ್ ಮಾರುಕಟ್ಟೆ ಬಯಲು, ಐತಿಹಾಸಿಕ ಕೋಟೆಯ ಆವರಣ, ವೆಂಕಟೇಶ್ವರ ಕಾಲೊನಿಯ ಹನುಮಾನ್ ದೇವಸ್ಥಾನದ ಉದ್ಯಾನ, ಎಸ್ವಿಪಿ ವೃತ್ತದ ಬಳಿಯ ಕಸದ ತೊಟ್ಟಿ... ಹೀಗೆ ಎಲ್ಲೆಂದರಲ್ಲಿ ಬಳಸಿದ ವಸ್ತುಗಳನ್ನು ಬಿಸಾಡಲಾಗಿತ್ತು. ಪೂಜಾ ಸಾಮಗ್ರಿಗಳಿಂದಲೇ ತುಂಬಿ ತುಳಿಕಿದ ಕಸದ ತೊಟ್ಟಿಗಳನ್ನು ಪಾಲಿಕೆಯ ಸ್ವಚ್ಛತಾ ಕರ್ಮಿಗಳು ಮಧ್ಯಾಹ್ನದ ನಂತರವೂ ವಿಲೇವಾರಿ ಮಾಡುತ್ತಿದ್ದುದು ಕಂಡುಬಂತು.