ಚಿಂಚೋಳಿ: ತಾಲ್ಲೂಕಿನ ಚಂದನಕೇರಾ ಗ್ರಾಮದ ಸಮಾಜ ಕಲ್ಯಾಣ ಇಲಾಖೆಯ ಬಾಲಕರ ವಸತಿ ನಿಲಯಕ್ಕೆ ಭಾನುವಾರ ಮಧ್ಯಾಹ್ನ ನೀರು ಸರಬರಾಜು ಪುನರ್ ಆರಂಭವಾಗಿದೆ.
ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೆಶಕ ಪ್ರಭುಲಿಂಗ ವಾಲಿ, ವಾರ್ಡನ್ ಗಣಪತಿ ಜಾಧವ ವಸತಿ ನಿಲಯಕ್ಕೆ ಭೇಟಿ ನೀಡಿ ಚಂದನಕೇರಾದಲ್ಲಿಯೇ ಮುಕ್ಕಾಂ ಹೂಡಿ ನೀರು ಸರಬರಾಜು ಮಾಡಿಸಿದರು.
ವಸತಿ ನಿಲಯದ ಅವ್ಯವಸ್ಥೆ ಕುರಿತು ಪ್ರಜಾವಾಣಿಯ ಭಾನುವಾರದ ಸಂಚಿಕೆಯಲ್ಲಿ ಪ್ರಕಟವಾದ ವರದಿಗೆ ಸ್ಪಂದಿಸಿದ ಅಧಿಕಾರಿಗಳು ವಸತಿ ನಿಲಯಕ್ಕೆ ದೌಡಾಯಿಸಿ ವಸತಿ ನಿಲಯದ ಸ್ಥಿತಿಗತಿ ಮತ್ತು ಮಕ್ಕಳ ಸಮಸ್ಯೆ ಕುರಿತು ವಾರ್ಡನ್ ಅವರಿಂದ ಮಾಹಿತಿ ಪಡೆದರು.
ವಸತಿ ನಿಲಯದಲ್ಲಿ 4 ದಿನಗಳಿಂದ ಕುಡಿವ ನೀರು ಪೂರೈಕೆಯಾಗಿರಲಿಲ್ಲ. ಇದರಿಂದ ಮಕ್ಕಳು ಸಮೀಪದ ಮಲ್ಕಪ್ಪ ಸಾಧು ಮುತ್ಯಾನ ಮಠಕ್ಕೆ ತೆರಳಿ ನೀರು ಕುಡಿಯುತ್ತಿದ್ದರು.
‘ಜಲ ಜೀವನ ಮಿಷನ್ ಯೋಜನೆ ಅಡಿಯಲ್ಲಿ ವಸತಿ ನಿಲಯಕ್ಕೆ ನಲ್ಲಿ ಸಂಪರ್ಕ ಕೈಗೊಳ್ಳಲಾಗಿದ್ದು ಇದರಿಂದಲೇ ಭಾನುವಾರ ಮಧ್ಯಾಹ್ನ 2.40ರಿಂದ ನೀರು ಸರಬರಾಜು ಪುನರ್ ಆರಂಭವಾಗಿದೆ. ಮಧ್ಯಾಹ್ನ ನಂತರ ಸ್ನಾನ ಮಾಡಿದ್ದೇವೆ’ ಎಂದು ವಿದ್ಯಾರ್ಥಿ ವಿದ್ಯಾಸಾಗರ ರಾಠೋಡ್ ಪ್ರಜಾವಾಣಿಗೆ ತಿಳಿಸಿದರು.
ವಸತಿ ನಿಲಯದಲ್ಲಿ ಕೊಳವೆಬಾವಿಯೇ ಇಲ್ಲದ ಕಾರಣ ಜಲ ಜೀವನ ಮಿಷನ್ ಯೋಜನೆ ಅಡಿಯಲ್ಲಿ ಮನೆ ಮನೆಗೆ ಗಂಗೆ ಕಾರ್ಯಕ್ರಮದಡಿಯಲ್ಲಿ ನಲ್ಲಿ ಸಂಪರ್ಕ ಪಡೆದುಕೊಳ್ಳಲಾಗಿದೆ. ಮೋಟಾರ್ ಸುಟ್ಟಿದ್ದರಿಂದ ಗ್ರಾಮದಲ್ಲಿ 4 ದಿನಗಳಿಂದ ನೀರು ಪೂರೈಕೆ ಸ್ಥಗಿತಗೊಂಡಿತ್ತು.
ಚಿಂಚೋಳಿ ತಾಲ್ಲೂಕು ಚಂದನಕೇರಾ ವಸತಿ ನಿಲಯಕ್ಕೆ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೆಶಕ ಪ್ರಭುಲಿಂಗ ವಾಲಿ ಭಾನುವಾರ ಭೇಟಿ ನೀಡಿ ಮಾಹಿತಿ ಪಡೆದರು
ಮೋಟಾರ್ ದುರಸ್ತಿಗೊಳಿಸಿದ್ದರಿಂದ ಭಾನುವಾರ ಮಧ್ಯಾಹ್ನದಿಂದ ನೀರು ಪೂರೈಕೆ ಪ್ರಾರಂಭವಾಗಿದೆ ಎಂದು ಪ್ರಭುಲಿಂಗ ವಾಲಿ ಪ್ರಜಾವಾಣಿಗೆ ತಿಳಿಸಿದರು.