ಸೇಡಂ (ಕಲಬುರಗಿ ಜಿಲ್ಲೆ): ಎರಡು ಬೈಕ್ಗಳ ಮಧ್ಯೆ ಡಿಕ್ಕಿ ಸಂಭವಿಸಿ ಓರ್ವ ಸ್ಥಳದಲ್ಲೇ ಮೃತಪಟ್ಟು, ಇನ್ನಿಬ್ಬರಿಗೆ ಗಂಭೀರ ಗಾಯಗಳಾದ ಘಟನೆ ಹೂಡಾ (ಕೆ) ಬಳಿಯ ರಾಜ್ಯ ಹೆದ್ದಾರಿ–10ರಲ್ಲಿ ಶುಕ್ರವಾರ ಸಂಭವಿಸಿದೆ.
ಕೊಂಕನಹಳ್ಳಿ ಗ್ರಾಮದ ಮಾಳಪ್ಪ ಪೂಜಾರಿ (30) ಮೃತ ವ್ಯಕ್ತಿ. ತೀವ್ರ ಗಾಯಗೊಂಡ ರವಿ ಪೂಜಾರಿ ಹಾಗೂ ಮಾಡಬೂಳ ತಾಂಡಾದ ರೋಹಿತ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕೊಂಕನಹಳ್ಳಿಯಿಂದ ಮಾಳಪ್ಪ ಹಾಗೂ ರವಿ ಮಳಖೇಡಕ್ಕೆ ಬರುತ್ತಿದ್ದರು. ಹೂಡಾ (ಕೆ) ಬಳಿ ರೋಹಿತ್ ಬೈಕ್ ನಿಲ್ಲಿಸಿಕೊಂಡು ನಿಂತಿದ್ದ. ಈ ವೇಳೆ ಅಪಘಾತ ಸಂಭವಿಸಿದ್ದು, ಗಂಭೀರ ಗಾಯಗೊಂಡ ಮಾಳಪ್ಪ ಸ್ಥಳದಲ್ಲೇ ಅಸುನೀಗಿದ್ದಾನೆ.
ಮಾಳಪ್ಪ ತನ್ನ ಕುಟುಂಬದೊಂದಿಗೆ ಪತ್ನಿಯ ತವರೂರಾದ ಉಡುಪಿಯಲ್ಲಿ ವಾಸವಿದ್ದ. ಮೂರ್ನಾಲ್ಕು ದಿನಗಳ ಹಿಂದೆ ಎಲ್ಲರೂ ಕೊಂಕನಹಳ್ಳಿಗೆ ಬಂದಿದ್ದರು. ಶನಿವಾರ ಉಡುಪಿಗೆ ವಾಪಸ್ ಆಗಬೇಕಿತ್ತು. ಅಷ್ಟರಲ್ಲಿ ಸಾವಿಗೀಡಾಗಿದ್ದಾರೆ.
ಮಳಖೇಡ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.