ಸಮೀಪದ ಮಗ್ಗುಲ ಗ್ರಾಮದ ರೈತ ಚೋಕಂಡ ಮಾದಪ್ಪ ಅವರು ಬೆಳೆದ ಫಸಲು ಬಿಟ್ಟು ಕಟಾವಿನ ಹಂತದಲ್ಲಿದ್ದ 1,200 ಬಾಳೆ ಗಿಡಗಳು ಗಾಳಿ ಮಳೆಗೆ ಧರೆಗುರುಳಿವೆ. ಈ ಕುರಿತು ಮಾತನಾಡಿದ ಚೋಕಂಡ ಮಾದಪ್ಪ ಅವರು, ಸಾಲ ಮಾಡಿ ಬಾಳೆಯನ್ನು ಕಷ್ಟಪಟ್ಟು ಬೆಳೆಸಿದ್ದೇವೆ. ಕೆಲ ದಿನಗಳಲ್ಲಿ ಬಾಳೆ ಕಟಾವು ಮಾಡಬೇಕಾಗಿತ್ತು. ಇದೀಗ ಬಾಳೆ ಗಿಡಗಳು ಧರೆಗೆ ಉರುಳಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ಬಿದ್ದ ಬಾಳೆಯನ್ನು ಇನ್ನು ಯಾರೂ ತೆಗೆದುಕೊಳ್ಳುವುದಿಲ್ಲ ಎಂದು ಅಳಲನ್ನು ತೋಡಿಕೊಂಡರು.