ಮಡಿಕೇರಿ: ಜಿಲ್ಲೆಯಲ್ಲಿ ಕಳೆದ 27 ದಿನಗಳಿಂದ ಸಂಚರಿಸಿದ್ದ ಸಂವಿಧಾನ ಜಾಗೃತಿ ಜಾಥಾ ಬುಧವಾರ ಮಡಿಕೇರಿ ತಲುಪಿತು. ಇಲ್ಲಿನ ರಾಜಾಸೀಟ್ ಉದ್ಯಾನದ ಮುಂದೆ ಪೂರ್ಣಕುಂಭ ಸ್ವಾಗತದೊಂದಿಗೆ ಸಂವಿಧಾನ ಜಾಗೃತಿ ಅಭಿಯಾನದ ಸ್ತಬ್ಧಚಿತ್ರವನ್ನು ಬರಮಾಡಿಕೊಂಡ ನೂರಾರು ಮಂದಿ ಭವ್ಯ ಮೆರವಣಿಗೆಯ ಮೂಲಕ ಕಾವೇರಿ ಕಲಾಕ್ಷೇತ್ರದವರೆಗೂ ಕರೆತಂದರು.
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳೊಂದಿಗೆ ವಿವಿಧ ಶಾಲಾ ಮಕ್ಕಳು ನೂರಾರು ಸಂಖ್ಯೆಯಲ್ಲಿ ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು. ಇವರಿಗೆ ಸರ್ಕಾರಿ ಮತ್ತು ಸರ್ಕಾರೇತರ ಸಂಸ್ಥೆಯ ಪ್ರತಿನಿಧಿಗಳು, ಆಟೊ ಚಾಲಕರು, ಸ್ತ್ರೀಶಕ್ತಿ ಗುಂಪುಗಳು ಸೇರಿದಂತೆ ಸಾರ್ವಜನಿಕರೂ ಸಾಥ್ ನೀಡಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಸಮಾಜ ಕಲ್ಯಾಣ ಹಾಗೂ ನಗರಸಭೆ ವತಿಯಿಂದ ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ಬುಧವಾರ ಏರ್ಪಡಿಸಿದ್ದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ‘ಡಾ.ಬಿ.ಆರ್.ಅಂಬೇಡ್ಕರ್ ಅವರ ಪುಸ್ತಕಗಳನ್ನು ಓದಬೇಕು’ ಎಂದು ತಿಳಿಸಿದರು.
‘ಭಾರತ ಸಂವಿಧಾನದಲ್ಲಿ ಪ್ರತಿಯೊಬ್ಬರೂ ಸಮಾನರು. ಎಲ್ಲರೂ ಸಮನಾಗಿ ಬದುಕುವ ಹಕ್ಕು ಹೊಂದಿದ್ದಾರೆ. ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಹೀಗೆ ಪ್ರತಿ ಕ್ಷೇತ್ರದಲ್ಲೂ ಸಹ ಸಮಾನ ಅವಕಾಶವನ್ನು ಹೊಂದಿದ್ದಾರೆ. ಬಡವ-ಬಲ್ಲಿದ, ಮೇಲು-ಕೀಲು ಎಂಬುದಿಲ್ಲ. ರಾಷ್ಟ್ರದಲ್ಲಿ ಯಾರೂ ಸಹ ಅಸಮಾನತೆ ಹೊಂದಿರಬಾರದು ಎಂದು ಸಂವಿಧಾನದಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ಇದನ್ನು ಎಲ್ಲರೂ ಅರಿತು ಕೊಳ್ಳಬೇಕು’ ಎಂದು ಹೇಳಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಎನ್.ವೀಣಾ ಮಾತನಾಡಿ, ‘ಭಾರತದ ಸಂವಿಧಾನ ಇಲ್ಲದಿದ್ದರೆ ರಾಷ್ಟ್ರದ ಪರಿಸ್ಥಿತಿಯನ್ನು ಊಹಿಸಿಕೊಳ್ಳುವುದು ಕಷ್ಟಸಾಧ್ಯ’ ಎಂದು ಹೇಳಿದರು.
ಯಾವುದನ್ನೇ ಆದರೂ ಪ್ರಶ್ನಿಸದೇ ಒಪ್ಪಬಾರದು. ಹೆಚ್ಚು ಪ್ರಶ್ನೆ ಕೇಳುವ ಮಕ್ಕಳನ್ನು ಶಿಕ್ಷಕರು ಬೈಯ್ಯಬಾರದು. ಶಿಕ್ಷಕರು ಮಕ್ಕಳಲ್ಲಿ ವೈಚಾರಿಕ ಮನೋಭಾವ ಬೆಳೆಸಬೇಕು ಎಂದರು.
ದಲಿತ ಸಂಘರ್ಷ ಸಮಿತಿಯ ದಿವಾಕರ ಮಾತನಾಡಿ, ‘ಭಾರತ ಸಂವಿಧಾನವು ಸಾರ್ವಭೌಮ, ಸಮಾಜವಾದಿ, ಸರ್ವಧರ್ಮ, ಸಮಭಾವ, ಎಲ್ಲರನ್ನು ಒಳಗೊಂಡಿದೆ. ಡಾ. ಅಂಬೇಡ್ಕರ್ ಅವರ ಪರಿಶ್ರಮದ ಫಲವನ್ನು ಇಂದಿನ ಭಾರತದ ಪ್ರಜೆಗಳಾದ ನಾವೆಲ್ಲರೂ ಅನುಭವಿಸುತ್ತಿದ್ದೇವೆ.ನಾವೆಲ್ಲರೂ ಸಮಾನತೆಯ ಸಮಾಜವನ್ನು ಕಟ್ಟುವಲ್ಲಿ ಈಗಿನಿಂದಲೇ ಕಟಿಬದ್ಧರಾಗಿದ್ದು, ಶ್ರಮಿಸೋಣ’ ಎಂದು ಕರೆ ಇತ್ತರು.
ನಗರಸಭೆ ಸದಸ್ಯ ಮನ್ಸೂರ್ ಮಾತನಾಡಿ, ‘ಭಾರತ ಸಂವಿಧಾನದಲ್ಲಿ ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಆಶಯದಡಿ ಸಮಾನತೆಯನ್ನು ಬೋಧಿಸಲಾಗಿದೆ. ಅದರಂತೆ, ಭಾರತದ ಪ್ರಜೆಗಳಾದ ನಾವೆಲ್ಲರೂ ಪ್ರೀತಿ, ವಿಶ್ವಾಸ, ಸಮಾನತೆಯಿಂದ ಬದುಕಿ ಸದೃಢ ಸಮಾಜವನ್ನು ಕಟ್ಟಬೇಕಿದೆ’ ಎಂದು ಹೇಳಿದರು.
ಹೋರಾಟಗಾರ ನಿರ್ವಾಣಪ್ಪ ಮಾತನಾಡಿ, ‘ಭಾರತದ ಸಂವಿಧಾನವು ಎಲ್ಲರಿಗೂ ಸಮಾನ ಅವಕಾಶಗಳನ್ನು ನೀಡಿದ್ದು, ನಮ್ಮ ಸಂವಿಧಾನ ರಚನೆಯ ಹಿಂದೆ ಶ್ರೇಷ್ಠ ಮಾನವತಾವಾದಿಯಾದ ಡಾ.ಬಿ.ಆರ್.ಅಂಬೇಡ್ಕರ್ ಅವರ ಶ್ರಮ ಅಪರಿಮಿತವಾಗಿದೆ’ ಎಂದು ಹೇಳಿದರು.
ನಗರಸಭೆ ಪೌರಾಯುಕ್ತ ವಿಜಯ್, ಸ್ಕೌಟ್ಸ್ ಮತ್ತು ಗೈಡ್ಸ್ನ ಪ್ರಧಾನ ಆಯುಕ್ತರಾದ ಕೆ.ಟಿ.ಬೇಬಿ ಮ್ಯಾಥ್ಯೂ, ಭಾಗಮಂಡಲ ಕಾವೇರಿ ಕಾಲೇಜಿನ ಪ್ರಾಂಶುಪಾಲ ಕೆ.ಜೆ.ದಿವಾಕರ, ತಹಶೀಲ್ದಾರ್ ಪ್ರವೀಣ್ ಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿ ದೊಡ್ಡೇಗೌಡ, ನಗರಸಭೆ ಸದಸ್ಯ ಬಶೀರ್, ಸ್ಕೌಟ್ಸ್ ಮತ್ತು ಗೈಡ್ಸ್ನ ಕಾರ್ಯದರ್ಶಿ ಬೊಳ್ಳಜ್ಜೀರ ಅಯ್ಯಪ್ಪ ಭಾಗವಹಿಸಿದ್ದರು.
ರಾಜಾಸೀಟ್ ಆವರಣದಿಂದ ಹೊರಟ ಮೆರವಣಿಗೆ ಬ್ಯಾಂಡ್ ವಾದನದ ಮೂಲಕ ಸ್ವಾಗತ ಕೋರಿದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದ ಜನಸ್ತೋಮ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.