ಗೋಣಿಕೊಪ್ಪಲು: ‘ಶೋಷಿತ ಜನಾಂಗ ಸ್ವಾಭಿಮಾನದಿಂದ ತಲೆ ಎತ್ತಿ ನಡೆಯಬೇಕಾದರೆ ಮೊದಲು ಅಂಬೇಡ್ಕರ್ ಅವರ ಜೀವನ ಚರಿತ್ರೆಯನ್ನು ಮೊದಲು ಓದಿ ತಿಳಿದುಕೊಳ್ಳಬೇಕು’ ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಟಿ.ಎನ್. ಗೋವಿಂದಪ್ಪ ಹೇಳಿದರು.
ಇಲ್ಲಿನ ಸಮುದಾಯ ಭವನದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವ ಮೂಲಕ ಅಂಬೇಡ್ಕರ್ ಅವರ 133ನೇ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ‘ದೇಶದ ಎಲ್ಲ ವರ್ಗದ ಶೋಷಿತರಿಗೆ, ಬಡವರಿಗೆ ಮೀಸಲಾತಿ ಸಂವಿಧಾನದ ಮೂಲಕ ಮೀಸಲಾತಿ ನೀಡಿದ ಅಂಬೇಡ್ಕರ್ ಅವರ ಜಯಂತಿಯನ್ನು ಎಲ್ಲ ವರ್ಗದ ಜನತೆ ಆಚರಿಸುವಂತಾಗಬೇಕು. ಸಂವಿಧಾನ ಈ ದೇಶದ ಪವಿತ್ರ ಗ್ರಂಥ ಅದನ್ನು ಉಳಿಸುವ ಕೆಲಸವಾಗಬೇಕು’ ಎಂದು ಪ್ರತಿಪಾದಿಸಿದರು.
ಸಂಚಾಲಕ ಸತೀಶ್ ಸಿಂಗಿ ಮಾತನಾಡಿ, ‘ವಿದ್ಯಾರ್ಥಿಗಳು ಅಂಬೇಡ್ಕರ್ ಹಾಕಿ ಕೊಟ್ಟ ಮಾರ್ಗದಲ್ಲಿ ಮುನ್ನಡೆದರೆ ಜೀವನ ಹಸನಾಗಲಿದೆ. ಯುವ ಜನಾಂಗ ಅಂಬೇಡ್ಕರ್ ಅವರ ತತ್ವಾದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು’ ಎಂದು ತಿಳಿಸಿದರು.
ಸಾಮಾಜಿಕ ಕಾರ್ಯಕರ್ತ ಜಲೀಲ್ ಮಾತನಾಡಿ, ‘ದೇಶದಲ್ಲಿ ಸಮಾನತೆ ಸಂದೇಶ ಸಾರಿದ ಆದರ್ಶ ಪುರುಷ ಅಂಬೇಡ್ಕರ್ ಅವರ ವ್ಯಕ್ತಿತ್ವ ಅನುಕರಣೀಯ’ ಎಂದರು.
ಸಂಘದ ಸಾಂಸ್ಕೃತಿಕ ಸಂಚಾಲಕ ಎಸ್.ಟಿ.ಗಿರೀಶ್ ಕ್ರಾಂತಿಗೀತೆ ಹಾಡಿದರು. ಮುಖಂಡರಾದ ನಾಗೇಂದ್ರ, ಶರಣ್, ರವಿ, ಪಳನಿ ಪ್ರಕಾಶ್, ಮಂಜು ರೈ, ದೀಪು, ಪೌರಕಾರ್ಮಿಕರ ಸಂಘದ ಜಿಲ್ಲಾ ಅಧ್ಯಕ್ಷ ವಿಜಯ್ ಕುಮಾರ್, ಮಂಜುಳಾ, ತಂಗರಾಜು, ದಿನೇಶ್, ಪಳನಿ, ಬಂಟ ರಾಜು, ಪರಮೇಶ್ವರ್, ರಾಧಾಕೃಷ್ಣ, ಮನೋಜ್ ಹಾಜರಿದ್ದರು.