ಮಡಿಕೇರಿ: ಕೊಡಗು ಜಿಲ್ಲೆಯ ಕುಶಾಲನಗರ ತಾಲ್ಲೂಕಿನ ನಂಜರಾಯಪಟ್ಟಣದಿಂದ ದುಬಾರೆ ಹಾಡಿಗೆ ಹೋಗುತ್ತಿದ್ದ ಯಾಂತ್ರಿಕ ದೋಣಿಯೊಂದು ಉಕ್ಕಿ ಹರಿಯುತ್ತಿದ್ದ ಕಾವೇರಿ ನದಿಯ ಮಧ್ಯೆ ಶನಿವಾರ ಕೆಟ್ಟು ನಿಂತು ಆತಂಕ ಸೃಷ್ಟಿಸಿತು. ದೋಣಿಯಲ್ಲಿ ಸುಮಾರು 8 ಮಂದಿ ಇದ್ದರು.
ದೋಣಿ ನಡೆಸುತ್ತಿದ್ದವರು ಮರದ ಕೊಂಬೆಯೊಂದನ್ನು ಹಿಡಿದು ಸುಮಾರು ಅರ್ಧಗಂಟೆಗಳ ಕಾಲ ನಿಂತಿದ್ದರು. ನಂತರ, ಮತ್ತೊಂದು ದೋಣಿಯ ಮೂಲಕ ಸಿಲುಕಿದ್ದವರನ್ನು ರಕ್ಷಿಸಲಾಯಿತು.
ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಉಪವಲಯ ಅರಣ್ಯಾಧಿಕಾರಿ ರಂಜನ್, ‘ದೋಣಿಯ ಚಕ್ರಕ್ಕೆ ಬಲೆ ಸಿಲುಕಿದ್ದರಿಂದ ಸಮಸ್ಯೆಯಾಗಿತ್ತು. ಕೂಡಲೇ ಎಲ್ಲರನ್ನೂ ರಕ್ಷಿಸಲಾಯಿತು. ಯಾವುದೇ ಅವಘಡ ಸಂಭವಿಸಿಲ್ಲ’ ಎಂದರು.