ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಡಗಿನಲ್ಲಿ ಬೀಡುಬಿಟ್ಟ ಕೇಂದ್ರ ತಂಡ

ಮೂವರು ಹಿರಿಯ ಅಧಿಕಾರಿಗಳ ತಂಡದಿಂದ ಹಾನಿ ಪ್ರದೇಶ ಪರಿಶೀಲನೆ
Last Updated 12 ಸೆಪ್ಟೆಂಬರ್ 2018, 15:57 IST
ಅಕ್ಷರ ಗಾತ್ರ

ಕುಶಾಲನಗರ: ಕೊಡಗು ಜಿಲ್ಲೆಯಲ್ಲಿ ಪ್ರಕೃತಿ ವಿಕೋಪದಿಂದ ಸಂಭವಿಸಿದ ಹಾನಿ ಪರಿಶೀಲನೆಗೆ ಬುಧವಾರ ಬಂದಿದ್ದ ಕೇಂದ್ರದ ಐಎಂಟಿಸಿ ಅಧ್ಯಯನ ತಂಡಕ್ಕೆ ಜಿಲ್ಲಾಧಿಕಾರಿ, ಸಚಿವರು, ಸಂಸದರು ಸಮಗ್ರ ಮಾಹಿತಿ ನೀಡಿದರು.

ಭಾರತ ಸರ್ಕಾರದ ಗೃಹ ಸಚಿವಾಲಯದ ಜಂಟಿ ಕಾರ್ಯದರ್ಶಿ ಅನಿಲ್ ಮಲ್ಲಿಕ್ ನೇತೃತ್ವದ ತಂಡ ಹಾರಂಗಿ ಪ್ರವಾಸಿ ಮಂದಿರದಲ್ಲಿ ಉನ್ನತ ಅಧಿಕಾರಿಗಳ ಸಭೆ ನಡೆಸಿತು. ಆಗ ಮಹಾಮಳೆ ಮತ್ತು ಗುಡ್ಡಗಳ ಕುಸಿತದಿಂದ ಆದ ಹಾನಿಯ ವಿವರವನ್ನು ಪವರ್ ಪಾಯಿಂಟ್ ಪ್ರಸೆಂಟೇಷನ್ ಮೂಲಕ ವಿವರಿಸಿದರು.

ಆಗ ಅನಾಹುತಗಳ ಕುರಿತು ಸಮಗ್ರ ಚಿತ್ರಣಗಳನ್ನು ವೀಕ್ಷಣೆ ಮಾಡಿದರು. ಜಿಲ್ಲಾಧಿಕಾರಿ ಶ್ರೀವಿದ್ಯಾ ಜಿಲ್ಲೆಯಾದ್ಯಂತ ಸಂಭವಿಸಿದ ದುರಂತಗಳ ಕುರಿತು ಸಮಗ್ರ ವಿವರವನ್ನು ನೀಡಿದರು. ಸಂಸದ ಪ್ರತಾಪ ಸಿಂಹ ಹಾಗೂ ಉಸ್ತುವಾರಿ ಸಚಿವ ಸಾ.ರಾ. ಮಹೇಶ್ ಅವರೂ ಸಹ ಕೊಡಗಿನಲ್ಲಿ ಸಂಭವಿಸಿದ ಮಳೆಹಾನಿ ಕುರಿತು ಕೇಂದ್ರ ತಂಡಕ್ಕೆ ಮಾಹಿತಿ ನೀಡಿದರು.

ಜಿಲ್ಲೆಯಾದ್ಯಂತ ಸಂಭವಿಸಿರುವ ಹಾನಿ ಕುರಿತು ಪ್ರಾಥಮಿಕ ಸಮೀಕ್ಷೆ ನಡೆಸಿ ಅಂದಾಜು ಪಟ್ಟಿ ಸಿದ್ಧಪಡಿಸಲಾಗಿದೆ. ಆದ,ರೆ ಸಂಪೂರ್ಣ ಸಮೀಕ್ಷೆ ನಡೆಸಿ ಮಾಹಿತಿ ಕಲೆ ಹಾಕಲು ಇನ್ನು 15 ದಿನಗಳ ಕಾಲಾವಕಾಶ ಬೇಕಾಗುತ್ತಿದೆ. ಈಗಾಗಲೇ ವಿವಿಧ ಇಲಾಖೆಗಳ ಸುಮಾರು 100 ತಂಡಗಳು ಸಮೀಕ್ಷೆ ಕಾರ್ಯ ಕೈಗೊಂಡಿವೆ. ವಿವಿಧ ಜಿಲ್ಲೆಗಳಿಂದ ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ಕೇಂದ್ರ ತಂಡಕ್ಕೆ ಮಾಹಿತಿ ನೀಡಿದರು.

ಗುಡ್ಡ ಕುಸಿತ, ರಸ್ತೆ ಕುಸಿತ, ನೆಲಸಮವಾಗಿ ಮನೆಗಳು, ಕಾಫಿ ತೋಟ, ಕರಿಮೆಣಸಿಗೆ ಹಾನಿ, ಕಿತ್ತಳೆ, ಏಲಕ್ಕಿ ಹಾನಿ, ಕುಶಾಲನಗರ ನೆರೆ ಪ್ರವಾಹದಿಂದ ಮುಳುಗಡೆಯಾದ ಬಡಾವಣೆಗಳ ಮಾಹಿತಿ, ಮುಕ್ಕೋಡ್ಲು ಸೇರಿದಂತೆ ಗ್ರಾಮಗಳ ಮೇಲೆ ಬೆಟ್ಟ ಕುಸಿದ ದುರಂತ, ಮಡಿಕೇರಿ ಮಂಗಳೂರು ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹಾಗೂ ಜಿಲ್ಲಾ ರಸ್ತೆಗಳ ಹಾನಿ ಕುರಿತು, ಕೃಷಿ, ತೋಟಗಾರಿಕೆ ಹಾನಿ, ಹಾರಂಗಿ ಜಲಾಶಯದ ನೀರಿನ ಸಂಗ್ರಹ ಪ್ರಮಾಣ ಸೇರಿದಂತೆ ಸಮಗ್ರ ಮಾಹಿತಿಯನ್ನು ಕೇಂದ್ರ ತಂಡ ಅಧಿಕಾರಿಗಳಿಗೆ ಮಾಹಿತಿ ನೀಡಲಾಯಿತು.

ಕೊಡಗು ಜಿಲ್ಲೆಯಲ್ಲಿ ಕಾಫಿ ತೋಟ, ಕರಿಮೆಣಸು ಸೇರಿದಂತೆ ಸಂಬಾರ ಬೆಳೆಗಳ ಹಾನಿ ಕುರಿತು ಕಾಫಿ ಮಂಡಳಿ ಉಪ ನಿರ್ದೇಶಕ ರಾಮುಗೌಂಡರ್, ರಾಷ್ಟ್ರೀಯ ಹೆದ್ದಾರಿ ಹಾನಿ ಕುರಿತು ರಾಷ್ಟ್ರೀಯ ಹೆದ್ದಾರಿ ಇಲಾಖೆ ಕಾರ್ಯಪಾಲಕ ಎಂಜಿನಿಯರ್ಹಾಗೂ ನೀರಾವರಿ ಇಲಾಖೆಸಂಬಂಧಿಸಿ ಮಾಹಿತಿಯನ್ನು ಕಾವೇರಿ ನೀರಾವರಿ ನಿಗಮದ ಕಾರ್ಯಪಾಲಕ ಎಂಜಿನಿಯರ್ ರಾಜೇಗೌಡ ಸೇರಿದಂತೆ ಇತರೆ ಇಲಾಧಿಕಾರಿಗಳಿಂದ ಮಾಹಿತಿ ನೀಡಿದರು.

ಮಹಾಮಳೆಯಿಂದ ಬೆಟ್ಟಗುಡ್ಡಗಳು ಕುಸಿದು 354 ಪಕ್ಕಾ ಮನೆಗಳು ಸಂಪೂರ್ಣ ಹಾನಿಯಾಗಿದ್ದು ₹ 3.36 ಕೋಟಿ ನಷ್ಟ ಅಂದಾಜಿಸಲಾಗಿದೆ.

726 ಮನೆಗಳು ಭಾಗಶಃ ಹಾನಿಯಾಗಿದ್ದು, ₹ 6.90 ಕೋಟಿ ನಷ್ಟ ಅಂದಾಜಿಸಲಾಗಿದೆ. 520 ಕಚ್ಚಾ ಮನೆಗಳು ಸಂಪೂರ್ಣ ಹಾನಿಯಾಗಿದ್ದು, ₹ 4.94 ಕೋಟಿ ನಷ್ಟ ಉಂಟಾಗಿದೆ. ಒಂದು ಲಕ್ಷಕ್ಕೂ ಹೆಚ್ಚು ಎಕರೆ ಪ್ರದೇಶದಲ್ಲಿ ಬೆಳೆದ ಕಾಫಿ ಫಲಸಲಿಗೆ ಹಾನಿಯಾಗಿದ್ದು, ₹ 386 ಕೋಟಿ ಅಂದಾಜು ನಷ್ಟ ಉಂಟಾಗಿದೆ.

15,800 ಎಕರೆ ಪ್ರದೇಶದಷ್ಟು ಕರಿಮೆಣಸು ಹಾನಿಯಾಗಿದ್ದು, ₹ 53.50 ಕೋಟಿ ನಷ್ಟ ಅಂದಾಜಿಸಲಾಗಿದೆ. 30,500 ಎಕರೆ ಭತ್ತಕ್ಕೆ ಹಾನಿಯಾಗಿದ್ದು, ₹ 6.5 ಕೋಟಿ ನಷ್ಟ ಅಂದಾಜಿಸಲಾಗಿದೆ. 4,513 ಎಕರೆ ಅಡಿಕೆ ತೋಟಕ್ಕೆ ಹಾನಿಯಾಗಿದ್ದು, ₹ 22.56 ಕೋಟಿ ನಷ್ಟ ಅಂದಾಜಿಸಲಾಗಿದೆ. 2,241 ಎಕರೆ ಬಾಳೆತೋಟಕ್ಕೆ ಹಾನಿಯಾಗಿದ್ದು, ₹ 5.48 ಕೋಟಿ ನಷ್ಟ ಉಂಟಾಗಿದೆ ಎಂಬುದನ್ನು ಮಾಹಿತಿ ನೀಡಲಾಯಿತು.

1,645 ಎಕರೆ ಶುಂಠಿಗೆ ಹಾನಿಯಾಗಿದ್ದು, ₹ 71 ಲಕ್ಷ ನಷ್ಟ ಅಂದಾಜಿಸಲಾಗಿದೆ ಎಂದು ಮಾಹಿತಿ ನೀಡಿದರು.

ರಾಷ್ಟ್ರೀಯ ಹೆದ್ದಾರಿ 61.71 ಕಿ.ಮೀ. ಉದ್ದ ಸಂಪೂರ್ಣ ಹಾನಿಯಾಗಿದ್ದು, ₹ 531 ಕೋಟಿ ನಷ್ಟ ಉಂಟಾಗಿದೆ. ಜಿಲ್ಲಾ ಹಾಗೂ ಗ್ರಾಮೀಣ ರಸ್ತೆಗಳು 148 ಕಿ.ಮೀ. ಉದ್ದದ ರಸ್ತೆ ಹಾನಿಯಾಗಿದ್ದು, ₹ 7.5 ಕೋಟಿ ಅಂದಾಜು ಪಟ್ಟಿ ಸಿದ್ಧಪಡಿಸಲಾಗಿದೆ ಎಂದು ಅಂಕಿ–ಅಂಶಗಳ ಮೂಲಕ ಸಮಗ್ರ ಮಾಹಿತಿಯನ್ನು ಕೇಂದ್ರ ತಂಡಕ್ಕೆ ನೀಡಲಾಯಿತು.

ಜಿಲ್ಲಾ ಪಂಚಾಯಿತಿ ಸದಸ್ಯೆ ಕೆ.ಪಿ. ಚಂದ್ರಕಲಾ, ಕೇಂದ್ರೀಯ ಜಲ ಆಯೋಗದ ಅಧೀಕ್ಷಕ ಎಂಜಿನಿಯರ್ ಜಿತೇಂದ್ರ ಪನ್ವರ್, ಕೇಂದ್ರೀಯ ಕೃಷಿ ಸಚಿವಾಲಯದ ಜಂಟಿ ನಿರ್ದೇಶಕ ಡಾ.ಪೊನ್ನುಸ್ವಾಮಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸುಮನ್ ಪನ್ನೇಕರ್, ಜಿ.ಪಂ. ಸಿಇಒ ಪ್ರಶಾಂತ್ ಮಿಶ್ರ, ಉಪವಿಭಾಗಾಧಿಕಾರಿ ನಂಜುಂಡೇಗೌಡ, ತಹಶೀಲ್ದಾರ್ ಮಹೇಶ್, ಕೃಷಿ ಇಲಾಖೆ ಉಪ ನಿರ್ದೇಶಕ ಕೆ.ರಾಜು, ಸಹಾಯಕ ನಿರ್ದೇಶಕ ಡಾ.ಎಚ್.ಎಸ್. ರಾಜಶೇಖರ್, ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ಚಂದ್ರಶೇಖರ್, ಸಹಾಯಕ ನಿರ್ದೇಶಕ ಮುತ್ತಪ್ಪ, ತೋಟಗಾರಿಕಾ ಅಧಿಕಾರಿ ಗಣೇಶ್, ನೀರಾವರಿ ಇಲಾಖೆ ಎಂಜಿನಿಯರ್ ನಾಗರಾಜು ಹಾಜರಿದ್ದರು.

ಅಂಕಿ–ಅಂಶ (ಕೊಡಗು ಜಿಲ್ಲೆಯ ಮಳೆ ಹಾಗೂ ಭೂಕುಸಿತದಿಂದ ಉಂಟಾದ ಹಾನಿಯ ವಿವರ, ಕೋಟಿಗಳಲ್ಲಿ)

ಮನೆ ಹಾನಿ ₹ 15.20

ಕಾಫಿ ₹ 386

ಕರಿಮೆಣಸು ₹ 53.5

ಭತ್ತ ₹ 6.5

ಅಡಿಕೆ ₹ 22.56

ಬಾಳೆ ₹ 5.48

ರಾಷ್ಟ್ರೀಯ ಹೆದ್ದಾರಿ ದುರಸ್ತಿಗೆ ₹ 531

ಜಿಲ್ಲಾ– ಗ್ರಾಮೀಣ ರಸ್ತೆ ಸುಧಾರಣೆಗೆ ₹ 7.5

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT