ಸೋಮವಾರಪೇಟೆ: ಆಯುಧ ಪೂಜೆ ಆಚರಿಸಲು ಪಟ್ಟಣ ಸೇರಿದಂತೆ ಗ್ರಾಮೀಣ ಭಾಗಗಳಲ್ಲಿ ಸಡಗರದ ಅಂತಿಮ ಸಿದ್ಧತೆ ನಡೆಯಿತು.
ಈ ಬಾರಿ ಹೂವಿನ ಬೆಲೆ ಹೆಚ್ಚಳದಿಂದಾಗಿ ವ್ಯಾಪರಸ್ಥರು ಕಳೆದ ಎರಡು ದಿನಗಳಿಂದ ಸರಿಯಾದ ವ್ಯಾಪಾರ ಇಲ್ಲದೆ ಖರೀದಿದಾರರನ್ನು ಕಾಯುತ್ತಿರುವ ದೃಶ್ಯ ಎಲ್ಲೆಡೆ ಕಂಡು ಬಂತು.
ಗಣೇಶನ ಹಬ್ಬದಂದು ಒಂದು ಮಾರು ಸೇವಂತಿಗೆ ಹೂವಿಗೆ ₹10 ಇದ್ದ ಬೆಲೆ, ಈ ಹಬ್ಬಕ್ಕೆ ₹100ಕ್ಕೆ ಮಾರಾಟ ಮಾಡುತ್ತಿರುವುದರಿಂದ ಜನರು ಹೆಚ್ಚಾಗಿ ಹೂ ಖರೀದಿಗೆ ಮುಂದಾಗಲಿಲ್ಲ. ಬೂದುಕುಂಬಳ ಚಿಕ್ಕ ಗಾತ್ರದ ಒಂದಕ್ಕೆ ₹50 ರಿಂದ ₹100ಕ್ಕೆ ಮಾರಾಟವಾಗುತ್ತಿತ್ತು. ಉಳಿದಂತೆ ಮಾವಿನ ಸೊಪ್ಪು, ಬಾಳೆಕಂಬ, ಕಬ್ಬಿನ ಜಲ್ಲೆ, ಮಕ್ಕಳ ಆಟದ ಸಾಮಗ್ರಿಗಳು ಪಟ್ಟಣದೆಲ್ಲೆಡೆ ಮಾರಾಟಕ್ಕೆ ಇಟ್ಟಿರುವ ದೃಶ್ಯ ಕಂಡುಬಂತು.
ಕೊಣನೂರಿನ ಹೂವಿನ ವ್ಯಾಪಾರಿ ಪಾರ್ವತಿ ಮಾತನಾಡಿ, ‘ಈ ಬಾರಿ ಮಾರುಕಟ್ಟೆಯಲ್ಲಿ ಹೂವಿನ ಬೆಲೆ ಹೆಚ್ಚಳ ಮತ್ತು ಹೆಚ್ಚು ಹೂವಿನ ವ್ಯಾಪಾರಿಗಳು ಬಂದಿರುವುದರಿಂದ ವ್ಯಾಪಾರ ಸಾಧಾರಣವಾಗಿ ನಡೆಯುತ್ತಿದೆ. ಎರಡು ದಿನಗಳಿಂದ ವ್ಯಾಪಾರ ಮಾಡುತ್ತಿದ್ದೇವೆ. ಯಾವುದೇ ಪ್ರಯೋಜನವಿಲ್ಲ’ ಎಂದು ತಿಳಿಸಿದರು.
ಹಾಸನ ಮತ್ತು ಮೈಸೂರು ಜಿಲ್ಲೆಗಳಿಂದ ಬೂದುಕುಂಬಳ ಕಾಯಿಗಳನ್ನು ವಾಹನಗಳಲ್ಲಿ ತುಂಬಿಕೊಂಡು ಬಂದು ರಸ್ತೆ ರಸ್ತೆಗಳಲ್ಲಿ ಮಾರುತ್ತಿರುವುದು ಕಂಡುಬಂತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.