ಸುಂಟಿಕೊಪ್ಪ: ಸಮೀಪದ ಕೆದಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಏಳನೇ ಮೈಲು ಸ್ವಾಮಿ ಕೊರಗಜ್ಜ ಸೇವಾ ಸಮಿತಿ ವತಿಯಿಂದ ಮೂರನೇ ವರ್ಷದ ಧರ್ಮದೈವಗಳ ನೇಮೋತ್ಸವವು ನೂರಾರು ಭಕ್ತರ ಸಮ್ಮುಖದಲ್ಲಿ ಶ್ರದ್ಧಾಭಕ್ತಿಯಿಂದ ನಡೆಯಿತು.
ಶುಕ್ರವಾರ ಬೆಳಿಗ್ಗೆ ದೈವಸ್ಥಾನದ ಶುದ್ಧಿ ಪೂಜೆಯ ನಂತರ ವಿವಿಧ ಪೂಜಾ ವಿಧಿವಿಧಾನಗಳು ನಡೆದವು.
ಶನಿವಾರ ರಾತ್ರಿ ಪಾಷಾಣಮೂರ್ತಿ, ಕಲ್ಕುಡ, ಚಾಮುಂಡಿ, ಗುಳಿಗ, ಧರ್ಮ ದೈವ ಪಂಜುರ್ಲಿ, ಮಂತ್ರದೇವತೆ, ಧರ್ಮರಾಜ ಗುಳಿಗನ ಕಾರಣಿಕ ನೇಮೋತ್ಸವವು ನಡೆಯಿತು. ದೈವಗಳ ಕಾರಣಿಕ ಶಕ್ತಿಯನ್ನು ಕಂಡ ಭಕ್ತರು ನಿಬ್ಬೇರಗಾದರು.
ನಂತರ ಭಕ್ತರು ತಮ್ಮ ಇಷ್ಟ ದೈವದಲ್ಲಿ ತಮ್ಮ ಕಷ್ಟ, ಮೋವುಗಳನ್ನು ಹಂಚಿಕೊಂಡು ಪರಿಹಾರ ಕಂಡುಕೊಂಡರೆ, ತಮಗಾದ ಪರಿಹಾರ ನಿವಾರಣೆಯಿಂದ ಸಂತೃಪ್ತರಾದ ಭಕ್ತರು ಹರಕೆ ಅರ್ಪಿಸಿ ನಿಟ್ಟುಸಿರು ಬಿಟ್ಟರು.
ಭಾನುವಾರ ಬೆಳಿಗ್ಗೆ ಕಾರಣಿಕ ದೈವದ ನೇಮಗಳು ನಡೆದವು. ಅದರಲ್ಲೂ ಕಾರಣಿಕ ದೈವ ಎಂದೇ ಕರೆಯಲ್ಪಡುವ ಸ್ವಾಮಿ ಕೊರಗಜ್ಜ ದೈವದ ಹರಕೆ ರೂಪದಲ್ಲಿ ಏಳು ದೈವ ಕೋಲ ನಡೆದವು. ಈ ಏಳು ಕೊರಗಜ್ಜ ದೈವಗಳಿಗೆ ಭಕ್ತರು ಹರಕೆಯ ಹೂವು, ವೀಳ್ಯದೆಲೆ, ಕಾಣಿಕೆ ಅರ್ಪಿಸಿದರು. ಭಕ್ತರಿಗೆ ಅನ್ನಸಂತರ್ಪಣೆ ನಡೆಯಿತು.