ಸೋಮವಾರಪೇಟೆ: ತಾಲ್ಲೂಕಿನ ಗರ್ವಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೂರ್ಲಬ್ಬಿ, ಮಂಕ್ಯಾ, ಕುಂಬಾರಗಡಿಗೆ ಗ್ರಾಮಗಳಲ್ಲಿ ಕಾಡಾನೆಗಳು ಬೀಡುಬಿಟ್ಟಿದ್ದು, ತೋಟ, ಗದ್ದೆಗಳಲ್ಲಿನ ಫಸಲು ನಾಶ ಮಾಡುತ್ತಿವೆ.
‘ಆನೆಗಳ ಹಾವಳಿಗೆ ಜೀವಭಯದಿಂದ ಮನೆಯಿಂದ ಹೊರಬರಲು ಸಾಧ್ಯವಾಗುತ್ತಿಲ್ಲ’ ಎಂದು ಗ್ರಾಮಸ್ಥರು ದೂರಿದ್ದಾರೆ.
ಕಾಫಿತೋಟ, ಭತ್ತದ ಗದ್ದೆ ಇತರೆ ಜಮೀನಿಗೆ ಹೋಗಿ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಶಾಲಾ ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು ಆತಂಕಗೊಂಡಿದ್ದಾರೆ. ಇದಲ್ಲದೆ ಕೃಷಿ ಫಸಲನ್ನು ತಿಂದು ತುಳಿದು ನಷ್ಟಪಡಿಸುತ್ತಿವೆ. ಕಾಡಾನೆಗಳನ್ನು ಗ್ರಾಮದಿಂದ ಓಡಿಸಬೇಕು. ಹಾಗೂ ಬೆಳೆ ಹಾನಿಗೆ ಸೂಕ್ತ ಪರಿಹಾರ ನೀಡಬೇಕೆಂದು ಸೋಮವಾರಪೇಟೆ ಅರಣ್ಯ ಇಲಾಖೆಗೆ ಗುರುವಾರ ದೂರು ನೀಡಿದ್ದಾರೆ.
ಚಾಮೇರ ಕುಟುಂಬದ ಸಂತೋಷ್, ತಿಮ್ಮಯ್ಯ, ದೇವಯ್ಯ, ಅಕ್ಷಿತ್, ಪಾಪಯ್ಯ, ಧರ್ಮಪ್ಪ, ಸುಬ್ರಮಣಿ ಅವರ ತೋಟದಲ್ಲಿನ ಬಾಳೆಗಿಡ, ಕಾಫಿ ಗಿಡ, ಏಲಕ್ಕಿ, ತಂಡೆಗಳನ್ನು ನಾಶಪಡಿಸಿವೆ.
‘ಇದು ಅತೀ ಹೆಚ್ಚು ಮಳೆ ಬೀಳುವ ಪ್ರದೇಶವಾಗಿದ್ದು, ಪ್ರತಿವರ್ಷ ಕೃಷಿ ಫಸಲು ಹಾನಿಯಾಗುತ್ತಿದೆ. ವಾರದ ಸಂತೆಯಲ್ಲಿ ಬಾಳೆಗೊನೆಗಳನ್ನು ಮಾರಾಟ ಮಾಡಿ, ದಿನಸಿಯನ್ನು ಮನೆಗೆ ತೆಗೆದುಕೊಂಡು ಹೋಗುತ್ತಿದ್ದೇವು. ಆದರೆ, ಕಾಡಾನೆಗಳ ಹಿಂಡು ಬಾಳೆಯನ್ನು ತಿಂದು ಮುಗಿಸಿವೆ. ಒಂದೂವರೆ ತಿಂಗಳಿನಿಂದ ಕಾಡಾನೆಗಳು ಕೃಷಿ ಭೂಮಿ ಬಿಟ್ಟು ಅರಣ್ಯಕ್ಕೆ ತೆರಳುತ್ತಿಲ್ಲ’ ಎಂದು ಕೃಷಿಕ ಮಂಕ್ಯಾ ಗ್ರಾಮದ ಚಾಮೇರ ಸಂತೋಷ್ ಬೇಸರ ವ್ಯಕ್ತಪಡಿಸಿದ್ದಾರೆ.
ಭತ್ತದ ಗದ್ದೆಯಲ್ಲಿ ಪೈರು ಹಸಿರಾಗಿದ್ದು, ಪೈರನ್ನು ತಿಂದು, ತುಳಿದು ನಾಶಪಡಿಸಿವೆ ಎಂದು ಅಜ್ಜಮಕ್ಕಡ ಮಾದಪ್ಪ ಹೇಳಿದರು.
ಪರಿಹಾರಕ್ಕೆ ಅರ್ಜಿ ಸಲ್ಲಿಸುವ ಸಂದರ್ಭ ಕುಂಬಾರಗಡಿಗೆ ಗ್ರಾಮದ ಮೊಣ್ಣಂಡ ದೊಡ್ಡಯ್ಯ, ಸೂರ್ಲಬ್ಬಿ ಗ್ರಾಮದ ಅಪ್ಪುಡ ಚಂಗಪ್ಪ ಇದ್ದರು.