ಶನಿವಾರಸಂತೆ (ಕೊಡಗು): ಸಮೀಪದ ತಪೋವನ ಕ್ಷೇತ್ರದ ಮನೇಹಳ್ಳಿ ಮಠದ ಬಿಲ್ವ ಗೋಶಾಲೆಯ ದಶಮಾನೋತ್ಸವದ ಅಂಗವಾಗಿ ಆಯೋಜಿಸಿದ್ದ ‘ಕುಲ ಗೋವು ಸಮ್ಮೇಳನ’ದಲ್ಲಿ ಮುಸ್ಲಿಂ ಸಮುದಾಯದವರಿಗೆ ವ್ಯಾಪಾರ ನಡೆಸಲು ಬಜರಂಗದಳದ ಕಾರ್ಯಕರ್ತರು ಅವಕಾಶ ನೀಡಲಿಲ್ಲ. ರಸ್ತೆ ಬದಿ ಹಾಗೂ ಮೈದಾನದಲ್ಲಿ ಹಾಕಿದ್ದ ಅಂಗಡಿಗಳನ್ನು ಕಾರ್ಯಕರ್ತರು ಶುಕ್ರವಾರ ತೆರವುಗೊಳಿಸಿದರು.
ಮಕ್ಕಳ ಆಟಿಕೆ ವಸ್ತು, ಕಬ್ಬಿನ ಜ್ಯೂಸ್, ತಿಂಡಿ ತಿನಿಸುಗಳ ಮಳಿಗೆಯನ್ನು ಮುಸ್ಲಿಂ ಸಮುದಾಯದ ವರ್ತಕರು ಹಾಕಿದ್ದರು. ‘ಗೋವು ಹತ್ಯೆ ಮಾಡುವರು, ಗೋವು ಸಮ್ಮೇಳನಕ್ಕೆ ಏಕೆ ಬರಬೇಕು. ಅವರಿಗೆ ಅವಕಾಶ ನೀಡುವುದಿಲ್ಲ’ ಎಂದು ಕಾರ್ಯಕತರು ಆಕ್ರೋಶ ಹೊರಹಾಕಿದರು.
‘ಹಿಂದೂಗಳು ನಡೆಸುವ ಜಾತ್ರೆಯ ವೇಳೆ ಮುಸ್ಲಿಂ ವರ್ತಕರಿಗೆ ಅವಕಾಶ ನೀಡುವುದಿಲ್ಲ. ಬೇಕಿದ್ದರೆ ಅವರ ಧಾರ್ಮಿಕ ಸ್ಥಳಗಳ ಬಳಿ ವ್ಯಾಪಾರ ಮಾಡಿಕೊಳ್ಳಲಿ’ ಎಂದು ಸೋಮವಾರಪೇಟೆ ತಾಲ್ಲೂಕು ಸಂಚಾಲಕ ಜೀವನ್ ಆಗ್ರಹಿಸಿದರು.