ಮಡಿಕೇರಿ: ಕೊಡಗಿನಲ್ಲಿ ನಡೆಯುತ್ತಿರುವ 67ನೇ ರಾಷ್ಟ್ರಮಟ್ಟದ 17ರ ವಯೋಮಿತಿಯ ಬಾಲಕಿಯರ (ಶಾಲೆಗಳ) ಹಾಕಿ ಪಂದ್ಯಾವಳಿಯಲ್ಲಿ ಶುಕ್ರವಾರ ಕರ್ನಾಟಕ ತಂಡ ಕ್ವಾರ್ಟರ್ಫೈನಲ್ ಪ್ರವೇಶಿಸಿತು. ಶನಿವಾರ ಸೋಮವಾರಪೇಟೆಯಲ್ಲಿ ನಡೆಯಲಿರುವ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಕರ್ನಾಟಕವು ಚಂಡೀಗಡವನ್ನು ಎದುರಿಸಲಿದೆ.
ಮಡಿಕೇರಿಯ ಭಾರತೀಯ ಕ್ರೀಡಾ ಪ್ರಾಧಿಕಾರದ ಹಾಕಿ ಮೈದಾನದಲ್ಲಿ ನಡೆದ ಎರಡೂ ಪಂದ್ಯಗಳಲ್ಲಿ ಕರ್ನಾಟಕದ ಆಟಗಾರರು ಗೋಲುಗಳ ಸುರಿಮಳೆಗರೆದರು. ಎರಡು ಪಂದ್ಯಗಳಿಂದ ರಾಜ್ಯವು ಒಟ್ಟು 17 ಗೋಲುಗಳನ್ನು ಕಲೆ ಹಾಕಿದ್ದು ವಿಶೇಷ ಎನಿಸಿತು.
ದಿನದ ಮೊದಲಿಗೆ ನಡೆದ ಲೀಗ್ ಪಂದ್ಯದಲ್ಲಿ ಮುಖಾಮುಖಿಯಾದ ಕೆವಿಎಸ್ (ಕೇಂದ್ರಿಯ ವಿದ್ಯಾಲಯ ಸಂಘಟನೆ) ತಂಡವನ್ನು 11–0 ಗೋಲಿನಿಂದ ಮಣಿಸಿ ಗೆಲುವಿನ ನಗೆ ಬೀರಿತು. ರಾಜ್ಯದ ಪರ ಅಕ್ಷರಾ ತಿಮ್ಮಯ್ಯ ಅವರು ಬರೋಬರಿ 5 ಗೋಲುಗಳನ್ನು ದಾಖಲಿಸಿದರೆ, ವಿ.ಬಿ.ಪ್ರತೀಕಾ 2 ಹಾಗೂ ಚೈತನ್ಯಾ, ಎಸ್.ಆರ್.ಪುಣ್ಯಾ, ಆರ್.ದೀಪಿಕಾ, ಪ್ರಿನಿಕಾ ಅಗ್ನೇಶ್ ಅವರು ತಲಾ ಒಂದೊಂದು ಗೋಲು ಗಳಿಸಿದರು.
ಸಂಜೆ ಸೂರ್ಯಾಸ್ತಕ್ಕೂ ಮುನ್ನ ನಡೆದ ಪ್ರೀಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಕರ್ನಾಟಕವು ಛತ್ತೀಸ್ಗಡ ತಂಡವನ್ನು 6–0 ಗೋಲಿನಿಂದ ಮಣಿಸಿ, ಕ್ವಾರ್ಟರ್ ಫೈನಲ್ ಪ್ರವೇಶಿಸಿತು. ರಾಜ್ಯದ ಪರ ವಿ.ಬಿ.ಪ್ರತೀಕಾ 2, ಪ್ರಿನಿಕಾ ಅಗ್ನೇಶ್, ಬಿ.ಅಕ್ಷರಾ, ಡಿ.ಯು.ಚೈತನ್ಯಾ, ಎಸ್.ಕೆ.ದೇಚಕ್ಕ ಅವರು ತಲಾ ಒಂದೊಂದು ಗೋಲು ಗಳಿಸಿದರು.
ಇನ್ನುಳಿದಂತೆ, ಜಿಲ್ಲೆಯ ವಿವಿಧೆಡೆ ನಡೆದ ಪಂದ್ಯಗಳಲ್ಲಿ ಪಂಜಾಬ್ ತಂಡವು ಮಹಾರಾಷ್ಟ್ರ ತಂಡವನ್ನು 3–0ಯಿಂದ, ಮಣಿಪುರ ತಂಡವು ಹರ್ಯಾಣ ತಂಡವನ್ನು 3–1, ಮಧ್ಯಪ್ರದೇಶ ತಂಡವು ಹಿಮಾಚಲ ಪ್ರದೇಶವನ್ನು 8–0, ಚಂಡೀಗಡ ಉತ್ತರಪ್ರದೇಶವನ್ನು 6–1, ಕೇರಳ ತಂಡವು ರಾಜಾಸ್ತಾನ ತಂಡವನ್ನು 3–0, ಜಾರ್ಖಾಂಡ್ ಬಿಹಾರ ತಂಡವನ್ನು 8–0, ಒಡಿಸ್ಸಾ ತಂಡವು ದೆಹಲಿ ತಂಡವನ್ನು 5–0 ಅಂತರದಿಂದ ಮಣಿಸಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದವು.
5 ಗೋಲುಗಳನ್ನು ದಾಖಲಿಸಿದ ರಾಜ್ಯದ ಅಕ್ಷರಾ ತಿಮ್ಮಯ್ಯ ಕರ್ನಾಟಕ ಆಡಿದ ಎರಡೂ ಪಂದ್ಯಗಳಲ್ಲಿ ಗೆಲುವು ಇಂದು ಕರ್ನಾಟಕ– ಚಂಡೀಗಡ ನಡುವೆ ಕ್ವಾರ್ಟರ್ ಫೈನಲ್ ಪಂದ್ಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.